ಬೆಂಗಳೂರು,ಜ.31- ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಭಾಷಣವನ್ನು ಎರಡೇ ಸಾಲಿನಲ್ಲಿ ಓದಿ ವಿವಾದಕ್ಕೆ ಮುನ್ನುಡಿ ಬರೆದಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವರ್ತನೆಯ ನಂತರ ಈ ಬಾರಿಯ ವಿಧಾನಮಂಡಲ ಜಂಟಿ ಅಧಿವೇಶನ ಗಮನ ಸೆಳೆಯುತ್ತಿದೆ.
ಜ.22 ರಿಂದ ಆರಂಭಗೊಂಡಿರುವ ಅಧಿವೇಶನ ಶನಿವಾರ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ವಿಬಿ ಜಿ ರಾಮ್ ಜಿ ಕುರಿತಾಗಿ ಚರ್ಚೆಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಬುಧವಾರದವರೆಗೆ ಅಧಿವೇಶನ ವಿಸ್ತರಣೆ ಮಾಡಲಾಗಿದೆ. ಈ ಬಾರಿಯ ಅಧಿವೇಶನ ಉಭಯ ಸದನಗಳಲ್ಲೂ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, ಸದನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಈ ಹಿಂದೆ ವಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಈ ಬಾರಿ ತಕ್ಕಮಟ್ಟಿಗೆ ಅದನ್ನು ಮೀರುವಲ್ಲಿ ಬಿಜೆಪಿ ಯಶಸ್ವಿ ಆಗಿರುವುದು ಗೋಚರಿಸುತ್ತಿದೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಅರ್ಧದಲ್ಲೇ ಮೊಟಕುಗೊಂಡಿರುವುದು ಬಿಜೆಪಿಗೆ ಬೂಸ್ಟ್ ನೀಡಿದೆ. ಸದನದಲ್ಲಿ ರಾಜ್ಯಪಾಲರಿಗೆ ಅಡ್ಡಿ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಉಭಯ ಸದನದಲ್ಲೂ ಬಿಜೆಪಿ ತೀವ್ರ ಸದ್ದು ಮಾಡುತ್ತಿದೆ. ವಿಧಾನ ಪರಿಷತ್ನಲ್ಲಿ ಕಲಾಪ ಸುಗಮವಾಗಿ ನಡೆಯಲು ಅವಕಾಶ ಇಲ್ಲದಂತಹ ಪರಿಸ್ಥಿತಿ ಶುಕ್ರವಾರದವರೆಗೆ ನಿರ್ಮಾಣವಾಗಿತ್ತು.
ಪ್ರತಿಭಟನೆ, ಅಬ್ಬರ :
ವಿಪಕ್ಷಗಳು ಸಹಜವಾಗಿ ಸರ್ಕಾರವನ್ನು ಕಟ್ಟಿಹಾಕಲು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತದೆ. ಇದು ಸಹಜ ಸಂಪ್ರದಾಯ. ಆದರೆ ಸದನ ಆರಂಭವಾದ ದಿನದಿಂದ ಈವರೆಗೆ ವಿಪಕ್ಷಗಳು ಧರಣಿ ನಡೆಸದೆಯೂ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿವೆ. ರಾಜ್ಯಪಾಲರ ಭಾಷಣ ವಿವಾದದ ಕುರಿತಾಗಿ ಸರ್ಕಾರ ವಿಪಕ್ಷಗಳಿಗೆ ಟಾಂಗ್ ನೀಡುವ ಕೆಲಸ ಮಾಡುತ್ತಿದ್ದರೂ, ಈ ಹಿಂದಿನ ಘಟನಾವಳಿಗಳನ್ನು ಉಲ್ಲೇಖಿಸಿ ವಿಪಕ್ಷ ಅದಕ್ಕೆ ತಿರುಗೇಟು ನೀಡುತ್ತಿದೆ.
ಕಳೆದ ಅಧಿವೇಶನಗಳಲ್ಲಿ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಬಿಜೆಪಿಯ ನಾಯಕರಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಸದನದಲ್ಲೇ ವ್ಯಕ್ತವಾಗುತ್ತಿತ್ತು. ಆದರೆ ಈ ಬಾರಿ ಒಂದಿಷ್ಟು ಸಮನ್ವಯತೆ ಗೋಚರಿಸುತ್ತಿದೆ. ವಿಪಕ್ಷದಲ್ಲಿ ಆರ್.ಅಶೋಕ್, ಸುನೀಲ್ ಕುಮಾರ್, ಸುರೇಶ್ ಕುಮಾರ್, ಅರವಿಂದ ಬೆಲ್ಲದ ತಮ ಮಾತುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಅಬಕಾರಿ, ಬಳ್ಳಾರಿ ಅಸ್ತ್ರ :
ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳ ಬಳಿ ಗಮನ ಸೆಳೆಯುವ ಅಸ್ತ್ರಗಳು ಇರಲಿಲ್ಲ. ಇದ್ದರೂ ಅದನ್ನು ಸದ್ಬಳಕೆ ಮಾಡಿಕೊಂಡಿರಲಿಲ್ಲ. ಆದರೆ ಈ ಬಾರಿ ಅಬಕಾರಿ ಇಲಾಖೆಯಲ್ಲಿ ಆಗಿರುವ ಹಗರಣ, ಬಳ್ಳಾರಿ ಗಲಾಟೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಅಸ್ತ್ರಗಳು ಇವೆ. ಇದನ್ನು ಬಿಜೆಪಿ ನಾಯಕರು ತಕ್ಕಮಟ್ಟಿಗೆ ಬಳಕೆ ಮಾಡುವುದರಲ್ಲೂ ಯಶಸ್ವಿ ಆಗುತ್ತಿದ್ದಾರೆ. ಇನ್ನು ಮೂರು ದಿನಗಳ ಕಾಲ ಅಧಿವೇಶನ ನಡೆಯಲಿರುವುದರಿಂದ ಮುಂದೆ ಅದನ್ನು ಯಾವ ರೀತಿಯಲ್ಲಿ ಬಳಕೆ ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪರಿಷತ್ನಲ್ಲೂ ಅಬ್ಬರ :
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಡ್ಡಿ ಉಂಟು ಮಾಡಿದ್ದಾರೆ ಎಂಬುದು ಬಿಜೆಪಿ ಆರೋಪವಾಗಿದೆ. ಹೀಗಾಗಿ ಪರಿಷತ್ ರಣರಂಗವಾಗಿದೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿ ಆಗಿದ್ದಾರೆ. ಅಧಿವೇಶನ ಆರಂಭಗೊಂಡ ದಿನದಿಂದ ಪರಿಷತ್ನಲ್ಲಿ ನಿರಂತರ ಗದ್ದಲದ ವಾತಾವರಣ ಇದೆ.
ಸದನದ ನಿಯಮದಂತೆ ನಡೆಯುತ್ತಿಲ್ಲ ಎಂದು ಸದನದಲ್ಲೇ ನಿಯಮಾವಳಿಗಳ ಪುಸ್ತಕವನ್ನು ಹರಿದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ರಾಜ್ಯಪಾಲರಿಗೆ ಅಡ್ಡಿ ಪಡಿಸಿದ ಆರೋಪ ಹೊರಿಸಿ ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ರವಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಹಾಗಾಗಿ ಪರಿಷತ್ ನಲ್ಲಿ ಶುಕ್ರವಾರದವರೆಗೂ ಗದ್ದಲ ಕೋಲಾಹಲ ತೀವ್ರಗೊಂಡಿತ್ತು.
ಬಿಜೆಪಿ ಸದನದಲ್ಲಿ ಅಬ್ಬರ ಉಂಟು ಮಾಡಿದರೂ ಆಡಳಿತ ಪಕ್ಷ ಕೈಕಟ್ಟಿ ಕುಳಿತಿಲ್ಲ. ವಿಪಕ್ಷಗಳ ಬಾಣಗಳನ್ನು ಎದುರಿಸುವ ನಿಟ್ಟಿನಲ್ಲಿ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಸದನದಲ್ಲಿ ಇದೇ ವಿಚಾರ ಪದೇ ಪದೇ ಚರ್ಚೆಗೆ ಬರುವಂತೆ ನೋಡಿಕೊಳ್ಳುವಲ್ಲಿಯೂ ಯಶಸ್ವಿ ಆಗುತ್ತಿದೆ.
ಈಗಾಗಲೇ ಪತ್ರಿಕೆಗಳಲ್ಲಿ ವಿಬಿ ಜಿ ರಾಮ್ ಜಿ ವಿರುದ್ದ ಜಾಹೀರಾತು ನೀಡಿದೆ. ಈ ಜಾಹೀರಾತು ಸದನದಲ್ಲೂ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಸರ್ಕಾರದ ನಡೆಗೆ ವಿಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಮತ್ತೊಂದು ಕಡೆಯಲ್ಲಿ ರಾಜ್ಯಪಾಲರ ನಡೆಗೆ ತೀವ್ರ ವಿರೋಧ ಸೂಚಿಸುವುದರೊಂದಿಗೆ ಜನಾಭಿಪ್ರಾಯ ರೂಪಿಸಲು ಪ್ರಯತ್ನ ನಡೆಸುತ್ತಿದೆ.
ಜೆಡಿಎಸ್ ಸೈಲೆಂಟ್ :
ಸದನದಲ್ಲಿ ಎಂದಿನಂತೆ ಈ ಬಾರಿಯೂ ಜೆಡಿಎಸ್ ಸೈಲೆಂಟ್ ಆಗಿದೆ. ಬಿಜೆಪಿ ಹಾಗೂ ಜೆಡಿಎಸ್ ಅಧಿವೇಶನಕ್ಕೂ ಮುನ್ನ ಸಭೆ ಸೇರಿ ಚರ್ಚೆ ನಡೆಸಿತ್ತು. ಆದರೆ ಜೆಡಿಎಸ್ ಶಾಸಕರು ಸದನದಲ್ಲಿ ಗಮನ ಸೆಳೆಯವ ರೀತಿಯಲ್ಲಿ ಕಾಣಿಸುತ್ತಿಲ್ಲ. ಸಭಾತ್ಯಾಗ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿಗೆ ಸಾಥ್ ನೀಡಿದೆ. ಆದರೆ ತಮದೇ ಆದ ಪ್ರತ್ಯೇಕ ಅಸ್ಥಿತ್ವವನ್ನು ತೋರಿಸುವಲ್ಲಿ ಜೆಡಿಎಸ್ ವಿಫಲವಾಗಿದೆ.
ಸೋಮವಾರದಿಂದ ಮತ್ತಷ್ಟು ಸದ್ದು ಗದ್ದಲ :
ಶುಕ್ರವಾರ ನಡೆದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನವನ್ನು ಬುಧವಾರದವರೆಗೆ ಮುಂದೂಡಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಮತ್ತಷ್ಟು ತೀವ್ರವಾಗಿ ಚರ್ಚೆ ನಡೆಯಲಿದೆ. ಸೋಮವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಲಿದ್ದಾರೆ.
ಮಂಗಳವಾರ ಮತ್ತು ಬುಧವಾರ ವಿಬಿ ಜಿ ರಾಮ್ ಜಿ ಕುರಿತಾಗಿ ಚರ್ಚೆಯಾಗಲಿದೆ. ಬುಧವಾರ ಕೊನೆಯ ದಿನದಂದು ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ವೇಳೆ ಸದ್ದು ಗದ್ದಲದ ಜೊತೆಗೆ ಸದನ ಅಂತ್ಯಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮುಂದಿನ ಮೂರು ದಿನಗಳ ಕಾಲದ ಅಧಿವೇಶನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
