ಬೆಂಗಳೂರು, ಜ.1- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಹೊಸ ವರ್ಷದಲ್ಲಿ ಸಾಧನೆಯ ಮತ್ತಷ್ಟು ಮೈಲುಗಲ್ಲುಗಳನ್ನು ಸಾಧಿಸಲಿದೆ ಎಂಬ ಅಚಲ ವಿಶ್ವಾಸವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳನ್ನು ಕೋರಿರುವ ಅವರು, 2026ರ ವರ್ಷವು ಸರ್ವರಿಗೂ ಶುಭವನ್ನುಂಟು ಮಾಡಲಿ. ಎಲ್ಲರ ಮನ ಮನೆಗಳಲ್ಲಿ ಹಾಗೂ ಎಲ್ಲೆಡೆಯೂ ಸುಖ-ಸಂತೋಷ, ನೆಮದಿ-ಸಮೃದ್ಧಿ ನೆಲೆಸಲಿ ಎಂದು ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ನಿರ್ಣಾಯಕ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ನವವೇಗದೊಂದಿಗೆ ಪ್ರಗತಿ ಸಾಧಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪರಿವರ್ತನಾತಕ ಬೆಳವಣಿಗೆಗೆ ರಾಷ್ಟ್ರವು ಸಾಕ್ಷಿಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವಾಲಯವು ಸ್ವದೇಶಿ ಉತ್ಪಾದನೆ ಬಲಪಡಿಸಲು, ಉಕ್ಕು ಉತ್ಪಾದನೆ ಸಾಮರ್ಥ್ಯ ವಿಸ್ತರಿಸಲು, ಶುದ್ಧ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಉದ್ಯೋಗವನ್ನು ಸೃಷ್ಟಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಇವೆಲ್ಲವೂ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಆಧಾರಸ್ತಂಭಗಳಾಗಿವೆ ಎಂದು ಅವರು ಹೇಳಿದ್ದಾರೆ.
