ಬೆಂಗಳೂರು, ಫೆ.10- ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆ ಒಳಪಡಿಸುವ ಕುರಿತಂತೆ ಎಸ್.ಐ.ಟಿ.ಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್ಐಟಿ ತನಿಖೆಯ ವೇಳೆ ಯಾವೆಲ್ಲಾ ಅಂಶಗಳು ಪತ್ತೆಯಾಗುತ್ತದೆಯೋ ಅದರ ಆಧಾರದ ಮೇಲೆ ವಿಚಾರಣೆ ಮುಂದುವರಿಯುತ್ತದೆ. ರಾಜ್ಯ ಸರ್ಕಾರ ತನಿಖೆಯ ವಿಚಾರವಾಗಿ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದರು.
ಸಿ.ಜೆ.ರಾಯ್ ಸಾವಿನ ಸಂದರ್ಭದಲ್ಲಿ ಮರಣಪೂರ್ವ ಪತ್ರ ಬರೆದಿರುವುದು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಸಿ.ಜೆ.ರಾಯ್ ಅವರಿಗೆ ಸೇರಿದ ಡೈರಿ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವುಗಳ ಪರಿಶೀಲನೆ ನಡೆಯುತ್ತಿದೆ. ಈ ಹಂತದಲ್ಲಿ ಎಲ್ಲವನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.
ಈ ಪ್ರಕರಣ ದುಬೈ ವ್ಯಾಪ್ತಿಯನ್ನು ಒಳಗೊಂಡಿದೆ ಆದಾಯ ತೆರಿಗೆ ಇಲಾಖೆಯ ವಿಚಾರಣೆಯು ಒಳಗೊಂಡಿದೆ ಎಲ್ಲವನ್ನು ಪರಿಶೀಲಿಸಬೇಕಿದೆ ಡೈರಿಯಲ್ಲಿ ಕೆಲವು ರಾಜಕಾರಣಿಗಳ ಹೆಸರು ಉಲ್ಲೇಖ ಇದೆ ಎಂಬ ಬಗ್ಗೆ ಸದ್ಯಕ್ಕೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.
ಎಪ್ಸ್ಟಿನ್ ಫೈಲ್್ಸತುಂಬಾ ದೊಡ್ಡ ವಿಷಯ. ಅಂತರಾಷ್ಟ್ರೀಯ ಮಟ್ಟಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಮತ್ತು ಆ ಕುರಿತು ನನಗೆ ಮಾಹಿತಿಯು ದೊರೆಯುವುದಿಲ್ಲ ಎಂದು ಹೇಳಿದರು.
ನಕ್ಸಲರು ಶರಣಾಗುವ ವೇಳೆಯಲ್ಲಿಯೇ ತಮ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಷರತ್ತು ಹಾಕಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಭೆ ನಡೆಸಿದ್ದರು. ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಬಗೆಹರಿಸಲು ವಿಶೇಷ ಅಭಿಯೋಜಕರನ್ನು ನೇಮಿಸುವ ಸಂಬಂಧ ಪಟ್ಟಂತೆ ಸೂಚನೆ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಶಾಸಕರು, ಸಚಿವರು ನೀಡುವ ಹೇಳಿಕೆಗಳಿಗೆ ಪ್ರತಿ ಹೇಳಿಕೆಗಳನ್ನು ನೀಡುವುದು ಸೂಕ್ತ ಅಲ್ಲ. ಹೈಕಮಾಂಡ್ ನಾಯಕರ ವಿಚಾರಗಳನ್ನು ಹೇಳಲು ನಾನು ಸೂಕ್ತ ವ್ಯಕ್ತಿಯಲ್ಲ. ಇನ್ನು ಮುಂದೆ ರಾಜಕೀಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಬಿಟ್ಟು ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಎಂದು ಗೃಹ ಸಚಿವರು ಸಲಹೆ ನೀಡಿದರು.
ನೆಲಮಂಗಲ ತಾಲೂಕಿನ ತ್ಯಾಮಗೊಂಡಲು ನಿವಾಸಿಯಾಗಿದ್ದ ಚಂದನ್ ಕುಮಾರ್ ಕೆನಡಾದ ಟೋರೆಂಟೋದಲ್ಲಿ ಹತ್ಯೆಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಚಂದನ್ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದರು. ಕುಟುಂಬಕ್ಕೆ ಒಬ್ಬನೇ ಮಗ, ಬೇರೆ ಮಕ್ಕಳು ಇರಲಿಲ್ಲ. ಇದು ದುರಂತ ಕಥೆಯಾಗಿದೆ ಎಂದು ವಿಷಾದಿಸಿದರು.
ಪ್ರತಿಭಾನ್ವಿತ ವ್ಯಕ್ತಿ ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ ಹತ್ಯೆಯಾಗಿರುವುದು ನೋವಿನ ವಿಚಾರ. ಕೆನಡಾದಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹಾಕಲಾಗಿದೆ ಎಂದರು.
ಕುಟುಂಬದ ಸದಸ್ಯರಿಗೆ, ತಂದೆ-ತಾಯಿಗಳಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.ಪಾರ್ಥಿವ ಶರೀರವನ್ನು ಮೂರ್ನಾಲ್ಕು ದಿನಗಳಲ್ಲಿ ಭಾರತಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ರಾಯಭಾರಿ ಕಚೇರಿಗೆ ಕಚೇರಿ ಗಮನಕ್ಕೆ ಪ್ರಕರಣ ಹೋಗಿದೆ, ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
