ಬೆಂಗಳೂರು,ಜು.2- ಬೇಬಿ ಕೇರ್ ಸೆಂಟರ್ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುತ್ತಿದ್ದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರ ಪ್ರಕರಣವಾಗಿದ್ದು, ಈಗಾಗಲೇ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಮೊಹಮದ್ ಸುಜೀತಾ ಅವರು ತನಿಖೆ ಮಾಡುತ್ತಿದ್ದಾರೆ ಎಂದರು.
ಈ ಬಗ್ಗೆ ಪೂರ್ವವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಅವರ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದರು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉದ್ಯೋಗಸ್ಥ ಪೋಷಕರು ತಮ ಮಕ್ಕಳನ್ನು ಬೇಬಿ ಕೇರ್ ಸೆಂಟರ್ಗೆ ಕಳುಹಿಸುತ್ತಾರೆ. ಆದರೆ ಕೆಲವು ಬೇಬಿ ಕೇರ್ ಸೆಂಟರ್ನ ಆಯಾಗಳು ಮಕ್ಕಳಿಗೆ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿರುವುದು ಬೇಸರದ ಸಂಗತಿ.
ನಗರದ ಬ್ರೂಕ್ ಫೀಲ್ಡ್ ಸೆಂಟರ್ನಲ್ಲಿರುವ ಬೇಬಿ ಕೇರ್ ಸೆಂಟರ್ಗೆ ಬರುತ್ತಿದ್ದ ಮಕ್ಕಳು ಗಲಾಟೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅಲ್ಲಿನ ಆಯಾಗಳು ಮಕ್ಕಳಿಗೆ ಹಲ್ಲೆ ಮಾಡಿ ಅವರ ಮೇಲೆ ನೀರು ಸುರಿದು ಭಯಪಡಿಸಿ ಹಿಂಸೆ ಕೊಡುತ್ತಿರುವ ಬಗ್ಗೆ ಪೋಷಕರು ಅಲ್ಲಿನ ಅವ್ಯವಸ್ಥೆಯನ್ನು ವಿಡಿಯೋ ಮಾಡಿಕೊಂಡು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ.
ವಿಡಿಯೋ ಆಧರಿಸಿ ಬೇಬಿ ಕೇರ ಸೆಂಟರ್ ಸಿಬ್ಬಂದಿಯ ಕಿರುಕುಳದ ಬಗ್ಗೆ ಸಹಾಯವಾಣಿಯ ತಿಲಕೇಶ್ ಕುಮಾರ್ ಎಂಬುವವರು ಸಿಬ್ಬಂದಿಗಳಾದ ಮಂಜುಳಾ, ವಿಜಯಲಕ್ಷ್ಮೀ, ಭವಾನಿ, ಬಿಂದು ಹಾಗೂ ಸಿಂಧೂ ಮೇಲೆ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
