ಬೆಂಗಳೂರು, ಫೆ.7- ಟ್ರಕ್ ಚಾಲಕನ ಗಮನ ಬೇರೆಡೆ ಸೆಳೆದು ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಕಳ್ಳರು ದೋಚಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಸಮೀಪ ನಡೆದಿದೆ.
ಕಳೆದ ಜನವರಿ 1ರಂದು ಈ ಘಟನೆ ನಡೆದಿದ್ದು, ಕಳ್ಳರ ಕೈಚಳಕ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇತ್ತೀಚೆಗೆ ಬೆಳಗಾವಿ ಸಮೀಪ 400 ಕೋಟಿ ರೂ. ಹಣ ಸಾಗಿಸುತ್ತಿದ್ದ ಎರಡು ಕಂಟೈನರ್ ಟ್ರಕ್ಗಳನ್ನು ಹೈಜಾಕ್ ಮಾಡಿದ ಘಟನೆ ಮಾಸುವ ಮುನ್ನವೇ ಇದು ನಡೆದಿರುವುದು ಆತಂಕ ಮೂಡಿಸಿದೆ.ಬೆಂಗಳೂರಿನಿಂದ ಧಾರವಾಡಕ್ಕೆ ಟ್ರಕ್ನಲ್ಲಿ ಫ್ಲಿಪ್ಕಾರ್ಟ್ ಕಂಪೆನಿಗೆ ಸೇರಿದ ಮೊಬೈಲ್ಗಳು ಸೇರಿದಂತೆ ಕೆಲ ಔಷಧ, ಆಹಾರ ಪದಾರ್ಥಗಳನ್ನು ಸಾಗಿಸಲಾಗುತ್ತಿತ್ತು.
ರಾಣೇಬೆನ್ನೂರಿನ ಕಾಕೋಳದಿಂದ ಮೊಟೇಬೆನ್ನೂರು ಮಧ್ಯೆ ಟ್ರಕ್ ಚಲಿಸುವಾಗ ಮಧ್ಯರಾತ್ರಿ 1 ಗಂಟೆ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಅದರಲ್ಲಿದ್ದ ಆರು ಬಾಕ್್ಸಗಳನ್ನು ಸಿನಿಮೀಯ ರೀತಿಯಲ್ಲಿ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ವಿಶೇಷವೆಂದರೆ, ಚೋರರು ಟ್ರಕ್ನಲ್ಲಿದ್ದ ವಸ್ತುಗಳನ್ನು ಒಡೆದು ತೆರೆಯುತ್ತಿದ್ದಂತೆಯೇ ಮಾಲೀಕರಿಗೆ ಮೆಸೇಜ್ ಹೋಗಿದೆ. ನಂತರ ಮಾಲೀಕರು ಟ್ರಕ್ ಚಾಲಕ ಮಲಿಕಾಜಾನ್ ಮುಲ್ಲಾಗೆ ಕರೆ ಮಾಡಿ ವಿಚಾರಿಸಿದಾಗ ಆತ ಆತಂಕಗೊಂಡು ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿ ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಈ ವಸ್ತುಗಳನ್ನು ಧಾರವಾಡದ ಕೊಟ್ಟೂರು ಗ್ರಾಮದ ಫ್ಲಿಪ್ಕಾರ್ಟ್ ವೇರ್ಹೌಸ್ಗೆ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾಣೇಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರ ನಡುವೆ ಈ ಕಳ್ಳತನ ನಡೆದಿರುವುದು ಭಾರೀ ಕುತೂಹಲ ಕೆರಳಿಸಿದೆ. ಪ್ರಕರಣ ಕೂಡ ತಡವಾಗಿ ಬೆಳಕಿಗೆ ಬಂದಿದ್ದು, ಎಸ್ಪಿ ಯಶೋಧಾ ವಂಟಗೋಡಿ ಅವರು ಪ್ರಕರಣ ಕುರಿತು ವಿಶೇಷ ತಂಡ ರಚಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
