ಬೆಂಗಳೂರು, ಫೆ.18- ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಬೆಂಗಳೂರು ಚಲೋ ನಡೆಸುತ್ತಾರೆ. ಬಸ್ ಸೇವೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಷ್ಕರಕ್ಕೆ ಕರೆ ನೀಡಿರುವ ನಾಲ್ಕು ಸಾರಿಗೆ ನಿಗಮಗಳ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಮುಷ್ಕರದ ಸಂದರ್ಭದಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಅಗತ್ಯ ಕಂಡುಬರುವುದಿಲ್ಲ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಂಸ್ಥೆಗಳ ಸಂಘಟನೆಗಳ ಮುಖಂಡರು ಬಸ್ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿಲ್ಲ. ಸರ್ಕಾರದ ಗಮನ ಸೆಳೆಯಲು ಬೆಂಗಳೂರು ಚಲೋ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ವಿರುದ್ಧ ಆಕ್ರೋಶ:
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಈ ಹಿಂದೆ 2021 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬಸ್ ಪ್ರಯಾಣದರ ಮತ್ತು ಜೊತೆಯಲ್ಲೇ ಲಗೇಜ್ ಸಾಗಾಣಿಕೆ ದರವನ್ನು ಏಕಕಾಲಕ್ಕೆ ಹೆಚ್ಚಿಸಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಯಾಣದರ ಹೆಚ್ಚಾದಾಗ ಸಾಗಾಣಿಕೆಯ ದರವೂ ಹೆಚ್ಚಾಗುವುದು ಸಹಜ. ನಮ ಸರ್ಕಾರ ಪ್ರಯಾಣದರ ಹೆಚ್ಚಿಸಿದಾಗ ಬಿಜೆಪಿಯವರು ವಿರೋಧ ಮಾಡಿದ್ದರು. ಈ ಹಿಂದೆ ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಐದು ವರ್ಷದಲ್ಲಿ ಶೇ.47ರಷ್ಟು ಪ್ರಯಾಣದರ ಹೆಚ್ಚಿಸಿದ್ದರು. ಇದನ್ನು ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಅಂಕಿ ಅಂಶಗಳ ಸಹಿತವಾಗಿ ಅಶೋಕ್ ಅವರಿಗೆ ತಿರುಗೇಟು ನೀಡಿದ್ದರು ಎಂದರು.
ಸಾರಿಗೆ ಸಂಸ್ಥೆಗಳಲ್ಲಿ 30 ಕೆ.ಜಿ. ಹೊರಗಿನ ಸರಕು ಸಾಗಾಣಿಕೆ ಉಚಿತವಿದೆ. ಆನಂತರ ಪ್ರಮಾಣಕ್ಕೆ ದರ ಪರಿಷ್ಕರಿಸಲಾಗಿದೆ ಎಂದರು.ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಬಿಜೆಪಿಯವರು ಟೀಕಿಸುತ್ತಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಬಿಜೆಪಿಯವರೇನು ತಮ ಕೈಯಿಂದ ಕೊಡುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ನಾವು ಕೂಡ ಕೈಯಿಂದ ಕೊಡುವುದಿಲ್ಲ. ಜನರಿಂದಲೇ ಸಂಗ್ರಹಿಸಿ ಜನರಿಗೆ ಕೊಡಬೇಕು. ಶ್ರೀಮಂತರಿಂದ ಪಡೆದು ಬಡವರಿಗೆ ನೀಡುವುದು ವಾಡಿಕೆ ಎಂದರು.
