ಬೆಂಗಳೂರು,ಏ.12- ಖಾಸಗಿ ಕಾರ್ಯಕ್ರಮದ ನಿಮಿತ್ತ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿಯವರು ಹಾಸನಕ್ಕೆ ತೆರಳುವಾಗ ಬೆಂಗಳೂರು- ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಸಚಿವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅರ್ಧ ಗಂಟೆಯಿಂದ ಯಾರೂ ಗಮನಿಸದೆ ರಸ್ತೆಯಲ್ಲಿಯೇ ಇದ್ದಿದ್ದನ್ನು ನೋಡಿ ಪೊಲೀಸ್ ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿ, ಸೂಕ್ತ ಚಿಕಿತ್ಸೆನೀಡುವಂತೆ ಅಲ್ಲಿನ ವೈದ್ಯರಿಗೆ ದೂರವಾಣಿ ಕರೆ ಮಾಡಿ ತಕ್ಷಣ ಸ್ಪಂದಿಸುವಂತೆ ಸಚಿವರು ತಿಳಿಸಿದ್ದಾರೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವಿಕ್ರಂ ನರಳಾಡುತ್ತಿದ್ದರು, ಇದೇ ಮಾರ್ಗವಾಗಿ ತೆರಳುತ್ತಿದ್ದ ಕೇಂದ್ರ ಸಚಿವರು ತಮ ಕಾರನ್ನು ನಿಲ್ಲಿಸಿ ಹೆದ್ದಾರಿ ಗಸ್ತು ಅವರಿಗೆ ದೂರವಾಣಿ ಕರೆಮಾಡಿ, ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಜೊತೆಗೆ ಖುದ್ದು ಸಚಿವರೇ ವೈದ್ಯರಿಗೆ ಕರೆಮಾಡಿ ಸ್ಪಂದಿಸುವಂತೆ ತಿಳಿಸಿದರು. ಸಚಿವರ ಮಾನವೀಯತೆ ಕಾರ್ಯಕ್ಕೆ ಗಾಯಾಳು ಕೃತಜ್ಞತೆ ಸಲ್ಲಿಸಿದ್ದಾರೆ.
