Friday, May 3, 2024
Homeರಾಜ್ಯಬೇಸಿಗೆಗೂ ಮುನ್ನವೇ ಜಲಕ್ಷಾಮದ ಭೀತಿ : ಎಲ್ಲೆಡೆ ಭುಗಿಲೇಳುತ್ತಿರುವ ನೀರಿನ ಹಾಹಾಕಾರ

ಬೇಸಿಗೆಗೂ ಮುನ್ನವೇ ಜಲಕ್ಷಾಮದ ಭೀತಿ : ಎಲ್ಲೆಡೆ ಭುಗಿಲೇಳುತ್ತಿರುವ ನೀರಿನ ಹಾಹಾಕಾರ

ಬೆಂಗಳೂರು,ಫೆ.25- ಮಳೆ ಕೊರತೆಯಿಂದಾಗಿ ಒಂದೆಡೆ ಭೀಕರ ಬರ ಪರಿಸ್ಥಿತಿ ಇದ್ದರೆ ಮತ್ತೊಂದೆಡೆ ಬೇಸಿಗೆ ಆರಂಭಕ್ಕೂ ಮುನ್ನ ಎದುರಾಗಿರುವ ಜಲಕ್ಷಾಮ ಆತಂಕ ಮೂಡಿಸಿದೆ. ಮಹಾನಗರಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬಯಲುಸೀಮೆಯಲ್ಲಷ್ಟೇ ಅಲ್ಲದೆ ಕರಾವಳಿ, ಮಲೆನಾಡು ಭಾಗದಲ್ಲೂ ನೀರಿನ ಕೊರತೆ ವರದಿಯಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಕಳೆದ ಜನವರಿಯಲ್ಲಿ ಸುಮಾರು 2000 ಗ್ರಾಮಗಳಲ್ಲಿ ನೀರಿನ ಕೊರತೆಯಾಗಲಿದೆ ಎಂಬ ಮುನ್ಸೂಚನಾ ವರದಿ ಇತ್ತು. ಅಂತರ್ಜಲಮಟ್ಟ ಕುಸಿತದಿಂದಾಗಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಹೊಸ ನೀರಿನ ಸೆಲೆ ಹಾಗೂ ಮೂಲಗಳ ಶೋಧ, ಬೋರ್‍ವೆಲ್‍ಗಳನ್ನು ಕೊರೆಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಪಂಚಖಾತ್ರಿ ಯೋಜನೆಗಳ ಜೊತೆಗೆ ಬರದಿಂದ ಎದುರಾಗಿರುವ ಹೆಚ್ಚುವರಿ ಆರ್ಥಿಕ ಹೊರೆ ಸರ್ಕಾರವನ್ನು ಹೈರಾಣು ಮಾಡಿದೆ. ಇನ್ನು ಫೆಬ್ರವರಿ ತಿಂಗಳಿನಲ್ಲೇ ಬಿಸಿಲ ಧಗೆ ತೀವ್ರಗೊಳ್ಳುತ್ತಿದೆ. ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ ಅಪಾಟ್‍ಮೆಂಟ್‍ಗಳ ಜನ ಕೂಡ ಬಿಂದಿಗೆ ಹಿಡಿದು ಸಾರ್ವಜನಿಕ ನಲ್ಲಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕಾವೇರಿ ನೀರಾವರಿ ನೀರು ನಿಯಂತ್ರಣ ಸಮಿತಿ ಹಾಗೂ ನೀರು ನಿರ್ವಹಣಾ ಮಂಡಳಿಗಳ ಆದೇಶಗಳ ಅನುಸಾರ ತಮಿಳುನಾಡಿಗೆ ಪದೇ ಪದೇ ಕಾವೇರಿ ನೀರು ಹರಿಸಲಾಗಿತ್ತು.

ಪರಿಣಾಮ ಪ್ರಸ್ತುತ ಕೆಆರ್‍ಎಸ್‍ನಲ್ಲಿ 16.32 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಗೆ 3ಂ.67 ನೀರಿನ ಸಂಗ್ರಹವಿತ್ತು . ಪ್ರಸ್ತುತ ಜಲಾಶಯದ ಒಟ್ಟು ಸಾಮಥ್ರ್ಯದಲ್ಲಿ ಶೇ.33ರಷ್ಟು ಮಾತ್ರ ನೀರಿದೆ.
ಬೆಂಗಳೂರಿನ ಕುಡಿಯುವ ನೀರಿಗಾಗಿ 19 ಟಿಎಂಸಿಯನ್ನು ಕಾಯ್ದಿರಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಜಲಾಶಯದಲ್ಲಿ ಸಂಗ್ರಹ ಇರುವುದೇ 16 ಟಿಎಂಸಿ ಆಗಿರುವುದರಿಂದ ಇನ್ನು ಮೂರು ಟಿಎಂಸಿ ಕೊರತೆ ಕಂಡುಬಂದಿದೆ.

ಕರ್ನಾಟಕ ಸಿಜೆ ಆಗಿ ನ್ಯಾ.ಅಂಜಾರಿಯಾ ಪ್ರಮಾಣ ಸ್ವೀಕಾರ

ಮಳೆಗಾಲ ಶುರುವಾಗುವ ಜೂನ್‍ವರೆಗೂ ಇರುವ ನೀರನ್ನು ಸರಿದೂಗಿಸಲು ಜಲಮಂಡಳಿ ಪ್ರಯಾಸಪಡುತ್ತಿದೆ. ಅದಕ್ಕಾ ಮೂರ್ನಾಲ್ಕು ದಿನಗಳಿಗೊಮ್ಮೆ ಅರ್ಧ ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ಕೊಳವೆ ಬಾವಿಗಳು ಕೂಡ ಬತ್ತಿ ಹೋಗಿರುವುದರಿಂದ ಜಲಕ್ಷಾಮ ಭೀಕರವಾಗಿದೆ. ಪರಿಸ್ಥಿತಿಯ ಲಾಭ ಪಡೆದ ಟ್ಯಾಂಕರ್ ಮಾಫಿಯಾ ದುಪ್ಪಟ್ಟು ದರ ಏರಿಕೆಮಾಡಿದೆ.

ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೊಳಗಾಗಿ ಪರದಾಡುತ್ತಿದ್ದು, ಅವರಿಗೆ ನೀರಿನ ಹೆಚ್ಚುವರಿ ಹೊರೆ ಕೂಡ ಹೆಗಲು ಭಾರ ಎನ್ನಿಸುವಂತಾಗಿದೆ. ಕಾವೇರಿ ನದಿಪಾತ್ರದ 4 ಜಲಾಶಯಗಳಲ್ಲಿ ಕಳೆದ ಇದೇ ವರ್ಷಕ್ಕೆ 67 ಟಿಎಂಸಿ ನೀರಿತ್ತು. ಪ್ರಸ್ತುತ 45.34 ಟಿಎಂಸಿ ಮಾತ್ರ ನೀರಿದೆ. ಶೇ.60ರಷ್ಟು ಕೊರತೆ ದೆ. ಇನ್ನು ಮಲೆನಾಡು ಭಾಗದ ಲಿಂಗನಮಕ್ಕಿ, ಸೂಫ, ವರಾಹಿ ಜಲಾಶಯಗಳಲ್ಲಿ ಕಳೆದ ವರ್ಷ 155 ಟಿಎಂಸಿ ಇತ್ತು. ಪ್ರಸ್ತುತ 109 ಟಿಎಂಸಿ ಮಾತ್ರ ಲಭ್ಯವಿದೆ.

ಕಲ್ಯಾಣ ಕರ್ನಾಟಕ ಭಾಗದ ಜಲಮೂಲವಾಗಿರುವ ಕೃಷ್ಣ ನದಿಪಾತ್ರದ ಜಲಾಶಯಗಳಲ್ಲಿ ಕಳೆದ ವರ್ಷ 215 ಟಿಎಂಸಿ ಇದ್ದರೆ ಈ ವರ್ಷ 148 ಟಿಎಂಸಿ ಮಾತ್ರ ಬಾಕಿ ಇದೆ. ಬಯಲುಸೀಮೆಯ ವಾಣಿವಿಲಾಸ ಸಾಗರದಲ್ಲಿ ಕಳೆದ ವರ್ಷಕ್ಕಿಂತಲೂ 9 ಟಿಎಂಸಿ ಕೊರತೆ ನೀಡಿದೆ.

ಮಹಾನಗರಿಗಳು ಹಾಗೂ ನಗರ ಪ್ರದೇಶಗಳಲ್ಲಿ ನೀರಿನ ಅಭಾವ ಒಂದೆಡೆಯಾದರೆ ಗ್ರಾಮೀಣ ಪ್ರದೇಶದಲ್ಲಿ ಜನಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನ ಮಧ್ಯಂತರದಲ್ಲಿ ಮಳೆ ಸುರಿದು ಕೆರೆಕಟ್ಟೆಗಳು ತುಂಬಿಕೊಳ್ಳದೆ ಇದ್ದರೆ ಜನ ನೀರಿಗಾಗಿ ಒದಾಡುವುದಲ್ಲದೇ ಮುಂದಿನ ಲೋಕಸಭೆ ಚುನಾವಣೆಗೆ ಇದು ಬಹುಚರ್ಚಿತ ವಿಷಯವಾಗುವ ಸಾಧ್ಯತೆ ಇದೆ.

ನಡು ರಸ್ತೆಯಲ್ಲೇ ಯುವಕನ ಭೀಕರ ಕೊಲೆ

ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.ಯಾವುದೇ ಸಮಸ್ಯೆಗಳಿಲ್ಲ ಎಂಬ ಸ್ಪಷ್ಟನೆಗಳು ಪದೇ ಪದೇ ಕೇಳಿಬರುತ್ತಿವೆ. ಮೇಲಿಂದ ಮೇಲೆ ಸಭೆಗಳು ನಡೆಯುತ್ತಿದ್ದು, ಸಮಸ್ಯೆಗೆ ಅವಕಾಶ ಕೊಡುವುದಿಲ್ಲ ಎಂಬ ಆಶ್ವಾಸನೆಗಳು ಜರುಯುತ್ತಿವೆ. ಆದರೆ ಜಲಾಶಯಗಳಲ್ಲೂ ನೀರಿಲ್ಲ. ಅಂತರ್ಜಲದಲ್ಲೂ ನೀರಿಲ್ಲದೆ ಇರುವಾಗ ಪೂರೈಕೆ ಮಾಡುವುದಾದರೂ ಎಲ್ಲಿಂದ ಎಂಬ ಪ್ರಶ್ನೆಗಳು ಎದುರಾಗಿವೆ.ನೀರು ಪೂರೈಕೆಯ ಸವಾಲನ್ನು ಸಮರ್ಥವಾಗಿ ನಿಭಾಯಿಸದೆ ಇದ್ದರೆ ಭವಿಷ್ಯದಲ್ಲಿ ಬರಗಾಲಕ್ಕಿಂತಲೂ ನೀರಿನ ಬವಣೆಯೇ ತೀವ್ರವಾಗಿ ಕಾಡುವ ಆಂತಕವಿದೆ.

RELATED ARTICLES

Latest News