Friday, May 10, 2024
Homeಬೆಂಗಳೂರುವಾರಕ್ಕೊಮ್ಮೆ ಸ್ನಾನ, ಹೋಟೆಲ್ ಊಟ : ಹನಿ ಹನಿ ನೀರಿಗೂ ಬೆಂಗಳೂರಿಗರ ಪರದಾಟ

ವಾರಕ್ಕೊಮ್ಮೆ ಸ್ನಾನ, ಹೋಟೆಲ್ ಊಟ : ಹನಿ ಹನಿ ನೀರಿಗೂ ಬೆಂಗಳೂರಿಗರ ಪರದಾಟ

-ರಮೇಶ್ ಪಾಳ್ಯ
ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನ ನೀರಿನ ಅಭಾವ ಇಲ್ಲಿನ ಜನರನ್ನು ಕಂಗೆಡಿಸಿದೆ. ದುಡ್ಡು ಕೊಟ್ಟರೂ ನೀರು ಸಿಗುತ್ತಿಲ್ಲ ಹೀಗಾಗಿ ವಾರಕ್ಕೊಮ್ಮೆ ಸ್ನಾನ, ಅಡುಗೆ ಮಾಡುವ ಬದಲು ಹೋಟೆಲ್ನಲ್ಲಿ ಆರ್ಡರ್ ಮಾಡಿ ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಲ್ಲದೆ ಸಂಸ್ಕರಿಸಿದ ನೀರನ್ನು ಬಳಸುವ ಮೂಲಕ ಒಂದು ಹನಿ ನೀರಿಗೂ ಒದ್ದಾಡುವಂತಹ ಸ್ಥಿತಿ ಬಂದೋದಗಿದೆ.

ನಗರದ ಬಾಬುಸಾಪಾಳ್ಯದ ನಿವಾಸಿಗಳು ಕಳೆದ ಎರಡು ತಿಂಗಳುಗಳಿಂದ ತಮ್ಮ ದೈನಂದಿನ ಪೂರೈಕೆಗಾಗಿ ನೀರಿನ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದಾರೆ. ನಮಗೆ ಪ್ರತಿನಿತ್ಯ ನಾಲ್ಕು ಟ್ಯಾಂಕರ್ಗಳು ಬೇಕಾಗುತ್ತವೆ. ನಮಗೆ ಒಂದು ಅಥವಾ ಎರಡು ಮಾತ್ರ ಸಿಗುತ್ತಿದೆ. ಕಳೆದ ಎರಡು-ಮೂರು ತಿಂಗಳಿಂದ ನಾವು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಅಲ್ಲಿನ ನಿವಾಸಿಯೊಬ್ಬರು ಅಲವತ್ತುಕೊಂಡಿದ್ದಾರೆ.

ಸರ್ಕಾರ ಟ್ಯಾಂಕರ್ ನೀರಿನ ದರ ನಿಗದಿ ಮಾಡಿರುವುದರಿಂದ ದರದಲ್ಲಿ ಸ್ಥಿರತೆ ಕಂಡರೂ ಸಮಸ್ಯೆ ದೊಡ್ಡದಾಗಿಯೇ ಇದೆ, ಬೇಡಿಕೆ ಹೆಚ್ಚಿರುವು ದರಿಂದ ಸಕಾಲಕ್ಕೆ ಟ್ಯಾಂಕರ್ಗಳು ಸಿಗುತ್ತಿಲ್ಲ ಎಂದು ಜನ ತಮ್ಮ ಅಳಲು ತೋಡಿಕೊಂಡಿದ್ದಾರೆ.ನಮಗೆ ಮಗು ಇದೆ, ತುಂಬಾ ಕಷ್ಟ, ಟ್ಯಾಂಕರ್ಗಳು ಬರುತ್ತಿಲ್ಲ, ಸರ್ಕಾರವು ಬೆಲೆಗಳನ್ನು ಕಡಿಮೆ ಮಾಡಿದೆ, ಆದರೆ ಅವು ಬರುತ್ತಿಲ್ಲ, ಅವರು ಬಂದರೂ ನೀರು ಬರುತ್ತಿಲ್ಲ. ಬಂದರೂ ಬರುವ ನೀರು ಸಾಕಾಗುವುದಿಲ್ಲ. ಇದು ಯಾವಾಗ ಪರಿಹಾರ ವಾಗುತ್ತದೆ ಮತ್ತು ನಾವು ಯಾವಾಗ ಸಾಮಾನ್ಯ ಜೀವನಕ್ಕೆ ಮರಳುತ್ತೇವೆ ಎಂದು ನನಗೆ ತಿಳಿದಿಲ್ಲ ಎಂದು ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಹೇಳಿದ್ದಾರೆ.

ಸರ್ಕಾರಗಳು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತಾರೆಯೇ ಹೊರತು ಜನರ ಯೋಗಕ್ಷೇಮವನ್ನು ಪರಿಗಣಿಸಲಿಲ್ಲ. ಅಪಾರ್ಟ್ಮೆಂಟ್ಗಳು ಮತ್ತು ರಸ್ತೆಗಳನ್ನು ನಿರ್ಮಿಸುವತ್ತ ಮಾತ್ರ ಗಮನ ಹರಿಸಲಾಗಿದೆ, ಆದರೆ ನಾವು ಅಂತರ್ಜಲ ಮಟ್ಟದ ವೃದ್ಧಿಗೆ ಕೆಲಸ ಮಾಡಬೇಕಾಗಿದೆ. ಇದನ್ನು ಎಂದಿಗೂ ಮಾಡಲಾಗಿಲ್ಲ. ನಾನು 15 ವರ್ಷಗಳಿಂದ ಇಲ್ಲಿದ್ದೇನೆ. ನಾನು ಯಾವುದೇ ಸರ್ಕಾರದಿಂದ ಇಂತಹ ಕ್ರಮಗಳನ್ನು ನೋಡಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪ್ರಾಥಮಿಕವಾಗಿ ತನ್ನ ನೀರನ್ನು ಎರಡು ಮೂಲಗಳಿಂದ ಪಡೆಯುತ್ತದೆ – ಕಾವೇರಿ ನದಿ ಮತ್ತು ಅಂತರ್ಜಲ. ಕುಡಿಯದ ಬಳಕೆಗಳಿಗೆ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ಮರುಬಳಕೆಯ ನೀರನ್ನು ಬಳಸಲಾಗುತ್ತದೆ. ಈಗ ಸ್ವಲ್ಪ ಸಮಯದಿಂದ ಮಳೆಯಿಲ್ಲದೆ ಇರುವುದರಿಂದ ಅಂತರ್ಜಲ ಬತ್ತಿ ಹೋಗಿದೆ.

ಬೋರ್ವೇಲ್ಗಳಲ್ಲಿ ನೀರು ಖಾಲಿಯಾಗಿರುವುದ ರಿಂದ ಮುಂದೆ ಹೇಗಪ್ಪಾ ಜೀವನ ಸಾಗಿಸೋದು ಅನ್ನುವಂತಾಗಿದೆ ಇಲ್ಲಿನ ಬದುಕು. ಬತ್ತಿರುವ ಬೋರ್ವೇಲ್ ದುರಸ್ತಿಪಡಿಸಲು ಸಾವಿರ ಸಾವಿರ ಹಣ ಖರ್ಚು ಮಾಡಬೇಕು ಖರ್ಚು ಮಾಡಿದರೂ ನೀರು ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ.

ಬೆಂಗಳೂರಿಗೆ ಪ್ರತಿದಿನ 2,600-2,800 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ ಮತ್ತು ಪ್ರಸ್ತುತ ಪೂರೈಕೆಯು ಅಗತ್ಯಕ್ಕಿಂತ ಅರ್ಧದಷ್ಟು ಇದೆ. ಇದರ ಪರಿಣಾಮ ನಗರದ ನಿವಾಸಿಗಳು ದಿನನಿತ್ಯ ಹರಸಾಹಸ ಪಡುವಂತಾಗಿದೆ.ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಟ್ಯಾಂಕರ್ಗಳಿಗೆ ದರ ನಿಗದಿಪಡಿಸಲಾಗಿದೆ. ವಾಹನಗಳನ್ನು ಸ್ವಚ್ಛಗೊಳಿಸಲು, ತೋಟಗಾರಿಕೆ ಅಥವಾ ನಿರ್ಮಾಣ ಚಟುವಟಿಕೆಗಳಿಗೆ ಕುಡಿಯುವ ನೀರನ್ನು ಬಳಸಿದರೆ ದಂಡ ವಿಧಸುವ ಎಚ್ಚರಿಕೆ ನೀಡಲಾಗಿದೆ.

ಅಸ್ಪತ್ರೆಗಳಿಗೂ ತಟ್ಟಿದ ಬಿಸಿ:
ನೀರಿನ ಸಮಸ್ಯೆ ಆಸ್ಪತ್ರೆಗಳಿಗೂ ತಟ್ಟಿದೆ. ನಗರದ ಹಲವಾರು ಆಸ್ಪತ್ರೆಗಳು ನೀರಿಗಾಗಿ ನೀರಿನ ಟ್ಯಾಂಕರ್ಗಳನ್ನು ಅವಲಂಬಿಸುವಂತಾಗಿದೆ. ಡಯಾಲಿಸಿಸ್ ಘಟಕಕ್ಕೆ ಬೇಕಾಗುವ ಸಾವಿರಾರು ಲೀಟರ್ಗಳ ನೀರಿಗೂ ಟ್ಯಾಂಕರ್ ಮೊರೆ ಹೋಗುವಂತಾಗಿದೆ.

ನಾವು ನಮ್ಮ ಆಸ್ಪತ್ರೆಗಳಲ್ಲಿ ನೀರನ್ನು ಮರುಬಳಕೆ ಮಾಡುತ್ತಿದ್ದೇವೆ ಮತ್ತು ಅದೇ ನೀರನ್ನು ಅನ್ಯ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಆದರೂ ನೀರು ಸಾಕಾಗುತ್ತಿಲ್ಲ ಎಂದು ವೈದ್ಯರು ಬೊಬ್ಬೆ ಹೊಡೆಯುತ್ತಿದ್ದಾರೆ.

ಬಿಜೆಪಿಗೆ ಸಿಕ್ಕ ಆಸ್ತ್ರ :
ಹಿಂದೆಂದೂ ಕಾಣದಂತಹ ಕುಡಿಯುವ ನೀರಿನ ಸಮಸ್ಯೆ ಸಿಲಿಕಾನ್ ಸಿಟಿಯನ್ನು ಕಾಡುತ್ತಿರುವುದು ಬಿಜೆಪಿಗೆ ಆಸ್ತ್ರವಾಗಿ ಪರಿಣಮಿಸಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಮುಖಂಡರುಗಳು ಸರ್ಕಾರದ ವಿರುದ್ಧ ಯುದ್ಧ ಸಾರಿದ್ದಾರೆ.
ಖಾಲಿ ಕೊಡಗಳೊಂದಿಗೆ ಸಾವಿರಾರು ಜನರನ್ನು ಪ್ರತಿಭಟನೆಗೆ ಸೇರಿಸಿ ಸರ್ಕಾರದ ವಿರುದ್ದ ಹರಿಹಾಯುತ್ತಿ ದ್ದಾರೆ. ಮಾತ್ರವಲ್ಲ, ನೀರು ನೀಡಲು ಸಾಧ್ಯವಾಗದ ನೀವು ಸರ್ಕಾರ ನಡೆಸಲು ಅರ್ಹರಲ್ಲ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.

ಆರೋಪ ನಿರಾಕರಣೆ:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಮಹದಾಯಿಯಂತಹ ಯೋಜನೆಗಳಿಗಾಗಿ ಬಿಜೆಪಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕು. (ಮಾಜಿ ಮುಖ್ಯಮಂತ್ರಿ) ಜಗದೀಶ್ ಶೆಟ್ಟರ್ ಮತ್ತು (ಕೇಂದ್ರ ಸಚಿವ) ಪ್ರಹ್ಲಾದ್ ಜೋಶಿ ಅವರಂತಹ ಜನರು ಕುಡಿಯುವ ನೀರಿನಿಂದ ಕೂಡ ಪ್ರಯೋಜನ ಪಡೆಯುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಐಪಿಎಲ್ ಡೌಟು:
ನಗರದ ಕುಡಿಯುವ ನೀರಿನ ಅಭಾವದಿಂದಾಗಿ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಸಲು ಉದ್ದೇಶಿಸಿರುವ ಐಪಿಎಲ್ ಪಂದ್ಯಗಳನ್ನು ಆಯೋಜಿಸಬಹುದೇ ಎಂದು ಕ್ರಿಕೆಟ್ ಅಧಿಕಾರಿಗಳು ಚರ್ಚಿಸುತ್ತಿರುವ ಪರಿಸ್ಥಿತಿ ಎದುರಾಗಿದೆ.

ದೀರ್ಘಕಾಲಿನ ಯೋಜನೆ ಬೇಕು:
ರಾತ್ರೋರಾತ್ರಿ ಪರಿಸ್ಥಿತಿ ಬಗೆಹರಿಯುವುದಿಲ್ಲ ಹೆಚ್ಚಿನ ಬೋರ್ವೆಲ್ಗಳನ್ನು ಕೊರೆಸುವುದು ಅಥವಾ ಟ್ಯಾಂಕರ್ಗಳನ್ನು ನೀಡುವುದರಿಂದ ಪ್ರಯೋಜನವಾಗುವುದಿಲ್ಲ, ಸರ್ಕಾರ ಕನಿಷ್ಠ 20 ವರ್ಷಗಳವರೆಗೆ ಯೋಜನೆ ರೂಪಿಸಬೇಕು. ಆಗ ಮಾತ್ರ ಈ ಸಮಸ್ಯೆ ಶಾಶ್ವತವಾಗಿ ಪರಿಹರಿಸಲ್ಪಡುತ್ತದೆ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ.

ಇದರ ಜೊತೆಗೆ ಬೆಂಗಳೂರಿನ ಜನತೆಗೆ ನೀರನ್ನು ಸಂರಕ್ಷಿಸುವುದು ಮುಖ್ಯವಾಗಿದೆ. ನಾವೂ ಸಹ ಪರಿಹಾರಗಳನ್ನು ಕಂಡುಕೊಳ್ಳಬೇಕು. ನಾವು ಎಲ್ಲವನ್ನೂ ಸರ್ಕಾರದ ಮೇಲೆ ಹಾಕಲು ಸಾಧ್ಯವಿಲ್ಲ. ನಾವು ನೀರನ್ನು ಉಳಿಸಲು ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರು ಸಲಹೆ ನೀಡಿದ್ದಾರೆ.

RELATED ARTICLES

Latest News