ತುಮಕೂರು, ಮೇ 19- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಕಾರ್ಯಕರ್ತರಿಗೆ ಬಾಕಿ ಎರಡು ವರ್ಷಗಳ ಅವಧಿಗಾದರೂ ಅಧಿಕಾರ ದೊರಕಿಸಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ಮೂರನೇ ವರ್ಷದ ಸಾಧನೆ-ಸೇವೆ ಮತ್ತು ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷದಲ್ಲಿ ಜನಪರವಾದ ಯಶಸ್ವಿ ಆಡಳಿತ ನೀಡಲಾಗಿದೆ ಎಂದು ಹೇಳಿದರು.
ಇನ್ನೂ ಎರಡು ವರ್ಷ ಅವಧಿಯಿದೆ. ಜನರ ಆಶಯದಂತೆ ನಮ ಸರ್ಕಾರ ಕೆಲಸ ನಿರ್ವಹಿಸಲಿದ್ದು, ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ ಎಂದರು.ಸರ್ಕಾರ ಮುಂದೆ ಹಲವು ಸವಾಲುಗಳಿವೆ. ಈವರೆಗೂ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಆ ಕಡೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಬಹಳಷ್ಟು ವಿಳಂಬವಾಗಿದೆ. ಕಾರ್ಯಕರ್ತರ ಶ್ರಮದಿಂದ ನಾವು ಶಾಸಕರಾಗಿ ಸಚಿವರಾಗಿದ್ದೇವೆ. ಕಾರ್ಯಕರ್ತರಿಗೆ ಶಕ್ತಿ ತುಂಬಬೇಕಿದೆ. ಇನ್ನೂ ಎರಡು ವರ್ಷಗಳ ಅವಧಿಗೆ ಮತ್ತೆ ಚುನಾವಣೆ ಎದುರಿಸಬೇಕು, ಯುದ್ಧಕ್ಕೆ ಸಿದ್ಧವಾಗಬೇಕು. ಅದಕ್ಕೂ ಮುನ್ನ ಕಾರ್ಯಕರ್ತರಿಗೆ, ನಿಗಮಮಂಡಳಿಗಳು ಸೇರಿದಂತೆ ಇತರೆಡೆಗಳಲ್ಲಿ ಅವಕಾಶ ಕಲ್ಪಿಸಿ ಹುರಿದುಂಬಿಸಬೇಕಿದೆ ಎಂದು ಹೇಳಿದರು.
