ಬೆಂಗಳೂರು,ಮೇ 26- ನಮ್ಮ ಭೂಮಿ – ನಮ್ಮ ಹಕ್ಕು! ಘೋಷಣೆಯೊಂದಿಗೆ ಬಿಡದಿ ಟೌನ್ಶಿಪ್ ಭೂಸ್ವಾಧೀನವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ.
ಇಲ್ಲಿ ರೈತರೇ ಇಲ್ಲ ಎಂದು ಹೇಳುವವರ ಕಣ್ಣು ತೆರೆಸಲು ನಾಳೆ (27ರಂದು )ಬೆಳಿಗ್ಗೆ 10 ಗಂಟೆಯಿಂದ ಮಾಗಡಿ ಕ್ಷೇತ್ರದ 26 ಗ್ರಾಮಗಳಲ್ಲಿ ರೈತರೊಂದಿಗೆ ಸಂವಾದ ನಡೆಸುವುದಾಗಿ ಘೋಷಿಸಿದ್ದಾರೆ.
ಬಿಡದಿ ಟೌನ್ಶಿಪ್ ಪ್ರಶ್ನೆ ಅಲ್ಲ, ಅದು ರೈತರ ಬದುಕಿನ ಪ್ರಶ್ನೆ. ಟೌನ್ಶಿಪ್ ಮಾಡುತ್ತಿರುವ ಜಾಗದಲ್ಲಿ ರೈತರೇ ಇಲ್ಲ ಎಂದು ಹೇಳುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇದು ನನ್ನ ಸವಾಲು ಎಂದು ಹೇಳಿದ್ದಾರೆ.
ರೈತರ ಕಷ್ಟ-ಸುಖ ಆಲಿಸಿ ವಾಸ್ತವ ಸ್ಥಿತಿ ಏನೆಂದು ತೋರಿಸಲು ಈ ಗ್ರಾಮ ಭೇಟಿ ಹಮಿಕೊಂಡಿದ್ದು, ಇಡೀ ನಾಡಿಗೆ ಅನ್ನ ನೀಡುವ ಈ ಭೂಮಿ ನಮಗೆ ಬರಿ ಮಣ್ಣಲ್ಲ, ಅದು ನಮ ಹೆತ್ತ ತಾಯಿ. ಕೋಟ್ಯಂತರ ರೂಪಾಯಿ ತಂದುಕೊಟ್ಟರೂ ಹೆತ್ತ ತಾಯಿಯನ್ನು ಯಾರಾದರೂ ಮಾರಿಕೊಳ್ಳಲು ಸಾಧ್ಯವೇ? ಇದು ಅಭಿವೃದ್ಧಿಯಲ್ಲ, ವಿನಾಶ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್ಶಿಪ್ನಿಂದ ಆಗುವ ನಷ್ಟ – ಅಂಕಿ ಅಂಶಗಳು:
9,600 ಎಕರೆ ಫಲವತ್ತಾದ ಭೂಮಿ ಬಲಿ, 10 ಲಕ್ಷಕ್ಕೂ ಹೆಚ್ಚು ಮರಗಳ ಮಾರಣಹೋಮ, ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆಗೆ ಹೊಡೆತ, ರೇಷೆ-ತೋಟಗಾರಿಕೆಗೆ ಕುತ್ತು ಬರಲಿದೆ.
ಈ ಹಿನ್ನೆಲೆಯಲ್ಲಿ ನಾಳೆ ಮಾಜಿ ಶಾಸಕ ಎ.ಮಂಜುನಾಥ್ ಅವರೊಂದಿಗೆ ಬೈರಮಂಗಲ, ಕಂಚಗಾರನಹಳ್ಳಿ, 3. ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ ಸೇರಿದಂತೆ ಇತರ ಗ್ರಾಮಗಳಲ್ಲಿ ನಿಖಿಲ್ ಕುಮಾರಸ್ವಾಮಿಯವರು ಸಂವಾದ ನಡೆಸಲಿದ್ದಾರೆ.
