ಕೊಪ್ಪಳ, ಜೂ.7- ಆ ಹುಡುಗನಿಗೆ ಇನ್ನೂ 18 ವರ್ಷ. ಆತನಿಗೆ ತನ್ನ ಕುಟುಂಬದವರ ಮೇಲೆ ಅದೇನು ಕೋಪವಿತ್ತೊ ಗೊತ್ತಿಲ್ಲ. ರಾತ್ರೋರಾತ್ರಿ ಮನೆಗೆ ಬಂದವನೇ ಜಗಳ ತೆಗೆದು ದೀಪ ನಂದಿಸಿ ಮನೆಯಲ್ಲಿದ್ದವರಿಗೆಲ್ಲ ಇರಿದು, ಕೊನೆಗೂ ತಾನೂ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತಹತ್ಯೆಗೆ ಯತ್ನಿಸಿದ್ದಾನೆ. ಆತನ ರೌದ್ರಾವತಾರಕ್ಕೆ ತಂದೆ ಮತ್ತು ಅಕ್ಕ ಸಾವನ್ನಪ್ಪಿದ್ದು, ತಾಯಿ ಹಾಗೂ ಪಾಪಿ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಜೀವನರಣದ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುವಂತಾಗಿದೆ.
ಅರೇ…ಇದೇನು ಇಂತಹ ಘಟನೆ ನಿಜಜೀವನದಲ್ಲಿ ನಡೆಯುವುದು ಸಾಧ್ಯವೇ? ಇದು ಸಿನಿಮಾ ಸ್ಟೋರಿ ಇರಬಹುದು ಎಂದುಕೊಂಡರೆ ನಿಮ ಊಹೆ ತಪ್ಪು, ಇದು ಕಥೆಯಲ್ಲ ಕಟು ಸತ್ಯ. ಇಂತಹ ಘನಘೋರ ಕೃತ್ಯ ನಡೆದಿರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ.
ಹೌದು ಇಂತಹ ಘನಘೋರ ಕೃತ್ಯ ಮಾಡಿರುವ ವ್ಯಕ್ತಿಯನ್ನು 18 ವರ್ಷದ ಸಾಯಿ ವೆಂಕಟರಮಣಿ ಎಂದು ಗುರುತಿಸಲಾಗಿದೆ. ಆತನ ಕ್ರೌರ್ಯಕ್ಕೆ ಆತನ ತಂದೆ ವೆಂಕಟ ನಾಯ್ಡು ಹಾಗೂ ಅಕ್ಕ ಪ್ರಗತಿ(19) ಬಲಿಯಾಗಿದ್ದರೆ, ತಾಯಿ ಸೌಜನ್ಯ(40) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರನ್ನು ಇರಿದ ನಂತರ ವೆಂಕಟರಮಣಿ ಅದೇ ಚಾಕುವಿನಿಂದ ತಾನು ಕತ್ತು ಕೊಯ್ದುಕೊಂಡಿದ್ದು, ಆತನನ್ನು ಬಳ್ಳಾರಿಯ ವಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದದ್ದು ಹೀಗೆ: ಹೊಸ ಅಯೋಧ್ಯೆ ಗ್ರಾಮದ ವೆಂಕಟನಾಯ್ಡು ಅವರದ್ದು ಚಿಕ್ಕ ಹಾಗೂ ಚೊಕ್ಕ ಸಂಸಾರ ಪತ್ನಿ, ಪುತ್ರ ಹಾಗೂ ಪುತ್ರಿಯೊಂದಿಗೆ ಅವರು ನೆಮದಿಯ ಜೀವನ ಸಾಗಿಸುತ್ತಿದ್ದರು. ನಾಯ್ಡು ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಆತನ ಪತ್ನಿ ಸೌಜನ್ಯ ಗೃಹಿಣಿಯಾಗಿದ್ದಾರೆ ಮೊದಲ ಪುತ್ರಿ ಪ್ರಗತಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಪುತ್ರ ಸಾಯಿ ವೆಂಕಟರಮಣಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.
ಇಂತಹ ಸುಖಿ ಕುಟುಂಬದ ಮೇಲೆ ಅದೇನೂ ವಕ್ರದೃಷ್ಟಿ ಬಿತ್ತೋ ಯಾರಿಗೂ ಗೊತ್ತಿಲ್ಲ. ನಿನ್ನೆ ರಾತ್ರಿ 9.30 ರ ಸುಮಾರಿಗೆ ಮನೆಗೆ ಬಂದ ಸಾಯಿ ವೆಂಕಟರಮಣಿ ದೆವ್ವ ಬಂದವನಂತೆ ವರ್ತಿಸುತ್ತ ಮನೆಯಲ್ಲಿದ್ದವರ ಮೇಲೆಲ್ಲಾ ಜಗಳ ತೆಗೆದಿದ್ದಾನೆ. ನಂತರ ಆತ ಮನೆಯ ಲೈಟ್ ಆಫ್ ಮಾಡಿ ಅಕ್ಕ ಪ್ರಗತಿ ಮೇಲೆ ಚಾಕುವಿನಿಂದ ಮನಬಂದತೆ ಇರಿದಿದ್ದಾನೆ, ಮಗಳ ಆಕ್ರಂದನ ಕೇಳಿಸಿಕೊಂಡು ಓಡಿ ಬಂದ ತಾಯಿಗೂ ಇರಿದಿದ್ದಾನೆ, ಜೊತೆಗೆ ತಂದೆಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ತಾನೂ ಕತ್ತು ಕೊಯ್ದುಕೊಂಡು ಆತಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಅಕ್ಕಪಕ್ಕದವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪ್ರಗತಿ ಹಾಗೂ ವೆಂಕಟನಾಯ್ಡು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸೌಜನ್ಯ ಹಾಗೂ ಆರೋಪಿ ವೆಂಕಟರಮಣಿಯನ್ನು ಬಳ್ಳಾರಿಯ ವಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರೂ ಜೀಮನರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಣ ನಿಗೂಢ; ನಾಲ್ಕು ಮಂದಿ ಇದ್ದ ವೆಂಕಟ ನಾಯ್ಡು ಕುಟುಂಬ ಸುಖಿಕುಟುಂಬವಾಗಿತ್ತು. ಎಲ್ಲರೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ, ದಿಢೀರನೆ ಮಗ ವೆಂಕಟರಮಣಿ ಮೈಮೇಲೆ ದೆವ್ವ ಬಂದವನಂತೆ ವರ್ತಿಸಿ ಎಲ್ಲರನ್ನು ಇರಿದು ಕೊಲೆ ಮಾಡಿ ತಾನು ಆತಹತ್ಯೆಗೆ ಯತ್ನಿಸಿರುವುದು ಏಕೆ ಎನ್ನುವುದಕ್ಕೆ ಇನ್ನು ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಕಾಂ ವ್ಯಾಸಂಗ ಮಾಡುತ್ತಿದ್ದ ಅಕ್ಕ ಪ್ರಗತಿ ಯಾರನ್ನಾದರೂ ಪ್ರೀತಿಸುತ್ತಿದ್ದಳೇ ಎನ್ನುವ ವಿಚಾರದಲ್ಲಿ ಆತ ಇಂತಹ ಪೈಶಾಚಿಕ ಕೃತ್ಯಕ್ಕೆ ಕೈ ಹಾಕಿರುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
