ಚಿಕ್ಕಮಗಳೂರು,ಜೂ.20-ಯುವ ಕಾಂಗ್ರೆಸ್ ಮುಖಂಡನೊಬ್ಬ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ಕೈಯಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದಲ್ಲಿ ನಡೆದಿದೆ.
ಆಲ್ದೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ತೇಜಸ್ ಎಂಬಾತ ರಸ್ತೆಯಲ್ಲೇ ಲಾಂಗ್ ಹಿಡಿದು ಪುಂಡಾಟ ಮೆರೆದಿದ್ದಾನೆ. ಗ್ರಾಮದಲ್ಲಿ ಹಬ್ಬ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಗ್ರಾಮಸ್ಥರೆಲ್ಲರೂ ಹಬ್ಬ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ, ಐದಳ್ಳಿ ಗ್ರಾಮದ ದಯಾನಂದ್ ಎಂಬುವವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಕಿರಿಕ್ ತೆಗೆದ ಯೂತ್ ಕಾಂಗ್ರೆಸ್ ಮುಖಂಡ ತೇಜಸ್ ಬೈಕ್ಗೆ ಅಡ್ಡಗಟ್ಟಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ, ತೇಜಸ್ ತಕ್ಷಣವೇ ತನ್ನ ಕಾರಿನಲ್ಲಿದ್ದ ಮಾರಕಾಸ್ತ್ರವನ್ನು ಹೊರ ತೆಗೆದು ದಯಾನಂದ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಸಾರ್ವಜನಿಕ ರಸ್ತೆಯಲ್ಲೇ ಲಾಂಗ್ ಹಿಡಿದು ಅಟ್ಟಹಾಸ ಮೆರೆದ ಕಾಂಗ್ರೆಸ್ ಮುಖಂಡನ ಈ ರೌಡಿಸಂಗೆ ಸ್ಥಳೀಯ ಗ್ರಾಮಸ್ಥರು ಸಾಕ್ಷಿಯಾಗಿದ್ದು, ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಾರಿನಿಂದ ಲಾಂಗ್ ತೆಗೆದು ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನಿಸಿದ ಇಡೀ ದಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು ಪುಂಡಾಟಿಕೆ ಕೈ ಮುಖಂಡನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
