ಬೆಂಗಳೂರು, ಜೂ.23- ಪದಶ್ರೀ ಪುರಸ್ಕೃತರಾದ ಅಂಕೇಗೌಡರ ಪುಸ್ತಕಮನೆ ಸಂರಕ್ಷಣೆಗೆ 2 ಎಕರೆ ಜಾಗ ಹಾಗೂ 5 ಕೋಟಿ ರೂ.ಗಳನ್ನು ಒದಗಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಅರಳಳ್ಳಿಯ ಪುಸ್ತಕ ಮನೆ ರಾಜ್ಯದ ಅಪರೂಪದ ಜ್ಞಾನ ಸಂಪತ್ತಾಗಿದೆ. ಈ ಗ್ರಂಥಾಲಯದ ಸಮಗ್ರ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ 2 ಎಕರೆ ಜಾಗ ಹಾಗೂ 5 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಅಂಕೇಗೌಡರ ಜ್ಞಾನ ಪ್ರತಿಷ್ಠಾನವು ಮುಖ್ಯಮಂತ್ರಿ ಡಿಕೆಶಿ ಅವರಿಗೆ ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿದ ಸಿಎಂ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪದಶ್ರೀ ಪುರಸ್ಕೃತರಾದ ಅಂಕೇಗೌಡ ಜೀವಮಾನದ ತ್ಯಾಗ ಹಾಗೂ ಅಪಾರ ಕೊಡುಗೆಯಿಂದ ಈ ವಿಶಿಷ್ಟ ಹಾಗೂ ಅದ್ಭುತ ಗ್ರಂಥಾಲಯ ನಿರ್ಮಾಣಗೊಂಡಿದೆ. ಇದರಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕವಾದ ಅತ್ಯಮೂಲ್ಯ ಹಾಗೂ ಅಪರೂಪದ ಪುಸ್ತಕ ಸಂಗ್ರಹವಿದ್ದು, ಇದು ರಾಜ್ಯದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಜ್ಞಾನಕೇಂದ್ರದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ದಶಕಗಳ ಕಾಲ ಸಕ್ಕರೆ ಕಾರ್ಖಾನೆಯ ನೌಕರರಾಗಿ ದುಡಿದು 20 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿದ ಅಂಕೇಗೌಡರ ಈ ಮಹತ್ತರ ಸಾಧನೆ ಶ್ಲಾಘನೀಯ. ಈ ಜ್ಞಾನಭಂಡಾರ ಅಪಾರ ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ ಭವಿಷ್ಯದ ಪೀಳಿಗೆಗೆ ಅನುಕೂಲವಾಗಬೇಕು ಮತ್ತು ಈ ಗ್ರಂಥಾಲಯದ ರಕ್ಷಣೆಗೆ ಸರ್ಕಾರ ಸ್ಪಂದಿಸಬೇಕೆಂದು ಪುಸ್ತಕ ಪ್ರೇಮಿಗಳು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಡಿ.ಕೆ.ಶಿವಕುಮಾರ್ರವರು ಸೂಚನೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಡಿಜಿಟಲ್ನ ಯುಗದಲ್ಲಿ ಈ ಪುಸ್ತಕ ಭಂಡಾರದ ರಕ್ಷಣೆ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನವಾಗಲಿದೆ ಎಂಬುದು ಎಲ್ಲರ ಸದಾಶಾಯವಾಗಿದೆ.ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಅಂಕೇಗೌಡರನ್ನು ಸನಾನಿಸಿದರು. ವಿಧಾನಪರಿಷತ್ ಸದಸ್ಯ ಎಂ.ಗೂಳಿಗೌಡ, ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಉಪಸ್ಥಿತರಿದ್ದರು.
