ಕೊರಟಗೆರೆ,ಜೂ.23- ಚಾಲಕನ ನಿಯಂತ್ರಣ ತಪ್ಪಿದ ಹಾಲಿನ ಕೆಎಂಎಫ್ ಟ್ಯಾಂಕರ್ ಆಯತಪ್ಪಿ ಉರುಳಿಬಿದ್ದ ಪರಿಣಾಮ ಸಾವಿರಾರು ಲೀಟರ್ ಹಾಲು ಮಣ್ಣುಪಾಲಾದ ಘಟನೆ ತಾಲ್ಲೂಕಿನ ಸಿದ್ದರಬೆಟ್ಟ ಸಮೀಪದ ನರ್ಸರಿ ತಿರುವಿನ ಬಳಿ ನಡೆದಿದೆ.
ತುಂಬಾಡಿಯಿಂದ ಸಿದ್ದರಬೆಟ್ಟ ಮಾರ್ಗವಾಗಿ ತೆರಳುತ್ತಿದ್ದ ಕೆಎಂಎಫ್ ಹಾಲಿನ ಟ್ಯಾಂಕರ್ ಸಿದ್ದರಬೆಟ್ಟ ಸಮೀಪ ಅರಣ್ಯ ಇಲಾಖೆಯ ನರ್ಸರಿ ತಿರುವಿನ ಬಳಿ ಪಲ್ಟಿಯಾಗಿದ್ದು, ಸಾವಿರಾರು ಲೀಟರ್ ಹಾಲು ರಸ್ತೆ ಬದಿಗೆ ಚೆಲ್ಲಿಹೋಗಿ ವ್ಯರ್ಥವಾಗಿದೆ.
ಅದೃಷ್ಟವಶಾತ್ ಟ್ಯಾಂಕರ್ ಚಾಲಕ ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಲಕನನ್ನು ತಕ್ಷಣ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಿಂದ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ಬಳಿಕ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು.
