ಬೆಂಗಳೂರು,ಜೂ.29- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅನಾಮಧೇಯ ವ್ಯಕ್ತಿಯೊಬ್ಬರ ಜೊತೆ ನಡೆಸಿರುವ ಆಡಿಯೋ ಸಂಭಾಷಣೆ ಭಾರೀ ವಿವಾದ ಸೃಷ್ಟಿಸಿದೆ.
ಕೇಂದ್ರದ ಪ್ರಮುಖ ವ್ಯಕ್ತಿಯೊಬ್ಬರ ಜೊತೆ ಸುಮಾರು 3 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತನಾಡಿರುವ ಈ ಆಡಿಯೋ ವೈರಲ್ಲಾಗಿದ್ದು, ಪಕ್ಷದಲ್ಲಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಿತೂರಿ ನಡೆಯುತ್ತಿದೆ ಎಂಬುದಕ್ಕೆ ಇದು ಪುಷ್ಟಿ ಒದಗಿಸಿದೆ.
ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕಿತ್ತು ಹಾಕಿ ಜೂನ್, ಜುಲೈ, ಆಗಸ್ಟ್ ತಿಂಗಳು ಮುಗಿದ ನಂತರ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿಯಲಿದೆ. ಅಲ್ಲಿಯ ತನಕ ಕಾದು ಬಿವೈವಿ ಅವರನ್ನು ಕಿಕ್ ಔಟ್ ಮಾಡಿ ಎಂದು ಡಿವಿಎಸ್ ಮಾತನಾಡಿದ್ದಾರೆ.
ಎರಡು ತಿಂಗಳು ನಾವು ಕಾಯೋಣ. ನವೆಂಬರ್ಗೆ ಹೇಗಿದ್ದರೂ ವಿಜಯೇಂದ್ರ ಅವಧಿ ಮುಗಿಯಲಿದೆ. ಅವರು ಕಿಕ್ ಔಟ್ ಆದರೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಲಿದೆ. ಅನಗತ್ಯವಾಗಿ ಇದು ನಾವೇಕೆ ಗೊಂದಲ ಸೃಷ್ಟಿಸಿಕೊಳ್ಳೋಣ. ಹೈಕಮಾಂಡ್ ನಾಯಕರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆಂದು ಹೇಳಿದ್ದಾರೆ.
ಈಗಲೇ ಕಿತ್ತು ಹಾಕಿದರೆ ನಾವು ಲಿಂಗಾಯಿತರ ವಿರೋಧಿ ಎಂದು ಸಾಬೀತಾಗುತ್ತದೆ. ನವೆಂಬರ್ನಲ್ಲಿ ಅಧಿಕಾರ ಮುಗಿಯುತ್ತಿದ್ದಂತೆ ಕಿತ್ತು ಹಾಕಿಬಿಡಿ. ಆಗ ಯಾವ ಗೊಂದಲವೂ ಇರುವುದಿಲ್ಲ ಎಂದಿದ್ದಾರೆ.
ವಿಜಯೇಂದ್ರ ಮುಂದುವರೆಯುವುದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಡಿವಾಡ ಇದೆಯೇ ಎಂದು ಅನಾಮಧೇಯ ವ್ಯಕ್ತಿ ಕೇಳಿದಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಟವಾಡುತ್ತಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಡಿವಿಎಸ್ ಹೇಳಿದ್ದಾರೆ.
ನಾನು ದೇವರನ್ನು ನಂಬುವ ವ್ಯಕ್ತಿ. ಈಗಲೂ ನಾನು ಹೋದರೆ ಬಸ್ ನಿಲ್ದಾಣ, ಆಟೋ ಸ್ಟಾಂಡ್ಗಳಲ್ಲಿ 40ರಿಂದ 50 ಸಾವಿರ ಜನ ಸೇರುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ತಾವು ಅಧ್ಯಕ್ಷ ಸ್ಥಾನಕ್ಕೆ ಸಿದ್ದ ಎಂದು ಹೇಳಿಕೊಂಡಿದ್ದಾರೆ. ನಾನು ಈ ಹಿಂದೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆಗ ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದೆ. ಈಗ ಎಲ್ಲವೂ ವಿರುದ್ಧವಾಗಿ ನಡೆಯುತ್ತಿವೆ ಎಂದು ಡಿವಿಎಸ್ ಅನಾಮಧೇಯ ವ್ಯಕ್ತಿಗೆ ಹೇಳಿದ್ದಾರೆ.
