ಚಿಕ್ಕಬಳ್ಳಾಪುರ,ಜೂ.30- ಹೋಮ್ ಸ್ಟೇ ಯೊಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿ, ಪ್ರಿಯಕರ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಘಟನೆ ತಾಲ್ಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿ ನಡೆದಿದೆ. ಸಾಯಿಸುರಭಿ ಸಾವನ್ನಪ್ಪಿದ ದುರ್ದೈವಿ. ಈಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಕೊಜ್ಜಿಕೋಡ್ ನ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಗಳ ಸಾವಿನ ಬೆನ್ನಲ್ಲೇ ತಾಯಿ ಗೀತಾ ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆಯೆಂದು ಆರೋಪಿಸಿದ್ದಾರೆ. ತಮ ಮಗಳು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕೇರಳ ಮೂಲದ ಕ್ಯಾಬ್ ಚಾಲಕ ಸಂಜೀತ್ ಅಲಿ ಪರಿಚಯವಾಗಿದ್ದ. ಪರಿಚಯ ಬೆಳೆದಂತೆ ಆಕೆಯನ್ನು ಪ್ರೆತಿಸುವುದಾಗಿ ಹೇಳಿ ಸಂಜೀತ್ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದ ಬೇಸತ್ತು ಆಕೆಗೆ ಬೇರೆ ಕಡೆ ವಿದ್ಯಾಭ್ಯಾಸ ಕೊಡಿಸಿದರೂ, ಆತ ಅಲ್ಲೂ ಹುಡುಕಿಕೊಂಡು ಬಂದು ಕಾಟ ಕೊಡುವುದನ್ನು ಮುಂದುವರಿಸಿದ್ದ ಎಂದು ತಾಯಿ ಗೋಳಾಡಿದ್ದಾರೆ.
ಇತ್ತೀಚೆಗಷ್ಟೇ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಫಿಜಿಯೋ ತೆರಪಿಸ್ಟ್ ಆಗಿ ಮಗಳು ಕೆಲಸ ಮಾಡುತ್ತಿದ್ದಳು. ಶನಿವಾರದಂದು ಅಲ್ಲಿ ಸತ್ಸಂಗ ಇದೆ, ನಾನು ಅಲ್ಲೇ ಇರುತ್ತೇನೆ ಎಂದು ತಾಯಿಗೆ ಹೇಳಿ ಹೋಗಿದ್ದಳು. ಆದರೆ ಸಂಜೀತ್ ಅಲಿ ಪೋನ್ ಮಾಡಿ, ಆಕೆಯನ್ನು ಹುಡುಕಿಕೊಂಡು ಹೋಗಿ ಮರಳು ಮಾಡಿ ಹೋಂ ಸ್ಟೇಗೆ ಕರೆದೊಯ್ದಿದ್ದಾನೆ. ಅವನೇ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತಾಯಿ ಗೀತಾ ಆಕ್ರೋಶ ಹೊರಹಾಕಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಸಾಯಿ ಸುರಭಿಯ ಸೋದರಮಾವ ಶಂಕರನಾರಾಯಣ ಮಾತನಾಡಿ, ಸಂಜೀತ್ಅಲಿ ವಿರುದ್ಧ ನಾವು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದರೆ ಸುರಭಿ ಬದುಕಿರುತ್ತಿದ್ದಳು ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಸುರಭಿ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಪುತ್ರಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಸ್ನೇಹಿತರ ಮನೆಯಲ್ಲಿದ್ದ ಸುರಭಿಯನ್ನ ಪತ್ತೆ ಮಾಡಿ ಪೋಷಕರ ಬಳಿ ಒಪ್ಪಿಸಿದ್ದರು. ನಿನ್ನೆ ಚೆಕ್-ಔಟ್ ಸಮಯ ಮುಗಿದರೂ ರೂಮ್ ತೆರೆಯದೆ ಇದ್ದ ಕಾರಣ ಹೋಂ ಸ್ಟೇ ಕೇರ್ಟೇಕರ್ ಹೋಗಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಹಾಗೂ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿವರ :ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮಂಚದ ಮೇಲೆ ಪತ್ತೆಯಾಗಿದ್ದು, ಫ್ಯಾನ್ ಗೆ ನೇಣು ಹಾಕಿದ್ದ ಹಗ್ಗ ಕತ್ತರಿಸಿದ ಸ್ಥಿತಿಯಲ್ಲಿ ಇತ್ತು. ಅಲ್ಲದೆ ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ದಟ್ಟವಾಗಿವೆ. ರೂಮ್ನಲ್ಲಿ ಡೈರಿ ಸಿಕ್ಕಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸುದ್ದಿಗಾರರಿಗೆ ಮಾಹಿತಿ ನೀಡಿ, ಯುವತಿಯದು ಕೊಲೆಯೊ ಅಥವಾ ಆತಹತ್ಯೆಯೋ ಎನ್ನುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇಬ್ಬರು ಆತಹತ್ಯೆಗೆ ಯತ್ನಿಸಿದ್ದರೇ ಎನ್ನುವ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದರು. ಸಂಜೀತ್ ಗೆ ಪ್ರಜ್ಞೆ ಬಂದ ಮೇಲೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊಗಳು ಇವರದೆ ಎನ್ನುವ ಮಾಹಿತಿ ಇದೆ. ಈ ಸಂಬಂಧ ನಂದಿ ಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
