ಬೆಂಗಳೂರು, ಜು.2- ನಗರದ ಹೊರವಲಯದ ತಾವರೆಕೆರೆಯ ಮಾದಾಪಟ್ಟಣ ಬಳಿಯ ಕಲ್ಲುಕ್ವಾರಿಯಲ್ಲಿ ಬಂಡೆ ಉರುಳಿ ಬಿದ್ದು ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.ದುರಂತದಲ್ಲಿ ಮಧ್ಯಪ್ರದೇಶದ ಹಾಗೂ ರಾಜ್ಯದ ಕಾರ್ಮಿಕರು ಮೃತಪಟ್ಟಿದ್ದಾರೆ. ಅವರುಗಳ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಬಿಹಾರದ ನಿವಾಸಿಗಳೆಂದು ಗುರುತಿಸಲಾಗಿದೆ. ಕಾವೇರಿ ಕಂಪೆನಿಗೆ ಸೇರಿದ ಕಲ್ಲುಕ್ವಾರಿ (ಕ್ರಷರ್)ಯಲ್ಲಿ 15 ರಿಂದ 20 ಮಂದಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಇಂದು ಬೆಳಗ್ಗೆ 7.30ರ ಸಮಯದಲ್ಲಿ ಇಟಾಚಿ ಮೂಲಕ ಕಲ್ಲುಗಳನ್ನು ತೆಗೆಯುತ್ತಿದ್ದಾಗ 2-3 ಬಂಡೆಗಳು ಉರುಳಿ ಬಿದ್ದ ಪರಿಣಾಮ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅದರಡಿ ಸಿಲುಕಿಕೊಂಡು ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಬಂಡೆ ಕೆಳಗೆ ಸಿಲುಕಿರುವ ಶಂಕೆ ಇದೆ.
ಗಾಯಗೊಂಡಿರುವ ಐವರನ್ನು ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸೇರಿಸಲಾಗಿದೆ.ಮುಂಜಾನೆಯಿಂದಲೇ ಕ್ವಾರಿಯಲ್ಲಿ ಡ್ರಿಲ್ಲಿಂಗ್ ನಡೆಯುತ್ತಿದ್ದು, ಇಟಾಚಿಯಿಂದ ಕಲ್ಲುಗಳನ್ನು ತೆಗೆಯುವ ಕೆಲಸ ನಡೆಯುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಂಡೆ ಕೆಳಗೆ ಸಿಲುಕಿರುವ ಕಾರ್ಮಿಕರನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ.
ದುರಂತ ಸ್ಥಳದಲ್ಲಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ತಾವರೆಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
