ಮೈಸೂರು,ಜು.4- ನಗರದಲ್ಲಿ ಸುಮಾರು 8.2 ಕೋಟಿ ವೆಚ್ಚದಲ್ಲಿ ಅಳವಡಿಸಿರುವ 50 ಟ್ರಾಫಿಕ್ ಸಿಗ್ನಲ್ ಯೋಜನೆ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕ ಹಣದ ದುರುಪಯೋಗಕ್ಕೆ ಉದಾಹರಣೆಯಾಗಿದೆ ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆರೋಪಿಸಿದ್ದಾರೆ.
ಈ ಯೋಜನೆಯನ್ನು ಮೂಲಭೂತ ನಗರ ಸಂಚಾರ ಯೋಜನೆಗಳಾದ ಪಾದಚಾರಿ, ಸಂಚಾರ ಗಣತಿ, ತಾಂತ್ರಿಕ ಮತ್ತು ಇಂಜಿನಿಯರಿಂಗ್ ಸಮೀಕ್ಷೆ, ಕಾರ್ಯಸಾಧ್ಯತಾ ಅಧ್ಯಯನ ಹಾಗೂ ನಾಗರಿಕರೊಂದಿಗೆ ಸಮಾಲೋಚನೆ ನಡೆಸದೆ ಜಾರಿಗೊಳಿಸಲಾಗಿದೆ ಎಂದು ಅವರು ಟೀಕಿಸಿದರು.
ಯೋಜನೆಯ ಉದ್ದೇಶವೇ ವಿಫಲವಾಗಿರುವುದು ಇದೀಗ ಸ್ಪಷ್ಟವಾಗಿದ್ದು, ನಗರದಲ್ಲಿನ ಅನೇಕ ಟ್ರಾಫಿಕ್ ಸಿಗ್ನಲ್ಗಳು ಪ್ರಸ್ತುತ ಕಾರ್ಯ ನಿರ್ವಹಿಸದೆ ಬಂದ್ ಸ್ಥಿತಿಯಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದರು ಹೇಳಿದರು.
ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕ ಪರಿಶೀಲನೆ ಇಲ್ಲದೆ ಖರ್ಚು ಮಾಡಿರುವ ಈ ಯೋಜನೆ ಕುರಿತು ತಕ್ಷಣವೇ ಉತ್ತರದಾಯಿತ್ವ ನಿಗದಿಪಡಿಸಿ, ಸಂಬಂಧಪಟ್ಟ ನಗರಾಡಳಿತ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಬೇಕು ಎಂದು ಯದುವೀರ್ ಒತ್ತಾಯಿಸಿದರು.
