ಮಂಡ್ಯ,ಜು.7- ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಳವಳ್ಳಿಯ ಹಲಗೂರು ಸಮೀಪದ ಮುತ್ತತ್ತಿಯಲ್ಲಿ ಜಿಲ್ಲಾಡಳಿತ ಮದ್ಯಪಾನ ನಿಷೇಧ ಹಾಗೂ ಕಾವೇರಿ ನದಿಯಲ್ಲಿ ಈಜುವುದನ್ನು ನಿಷೇಧಿಸಿದ್ದರೂ ಸಹ ಕಾವೇರಿ ದಡದಲ್ಲಿ ಮದ್ಯಪಾನ ಮಾಡುತ್ತಿದ್ದ 5 ಗುಂಪುಗಳ ಮೇಲೆ ಹಲಗೂರು ಪೊಲೀಸರು ದಾಳಿ ನಡೆಸಿದ್ದಾರೆ.
ಈ ಸಂಬಂಧ ಒಟ್ಟು 22 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಚಿವರ ಆದೇಶದ ಬಳಿಕ ದಾಳಿ: ಮುತ್ತತ್ತಿಯ ಕಾವೇರಿ ನದಿಯಲ್ಲಿ ಇತ್ತೀಚೆಗೆ 5 ಮಂದಿಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಮತ್ತೆ ಅವಘಡ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆದೇಶಿಸಿದ್ದರು.
ಈ ಹಿನ್ನಲೆಯಲ್ಲಿ ಸಿಐ ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐ ಲೋಕೇಶ್, ಕಿರಗವಾಲು ಪಿಎಸ್ಐ ರವಿಕುಮಾರ್, ಬೆಳಕವಾಡಿ ಪಿಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿ ಮುತ್ತತ್ತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾವೇರಿ ನದಿ ದಡದಲ್ಲಿ ಮದ್ಯಪಾನ ಮಾಡುತ್ತಿದ್ದವರನ್ನು ಬಂಧಿಸಿ ಹಲಗೂರು ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ.
ಸುರಕ್ಷಿತವಾಗಿ ತೆರಳಿ:
ಈ ಕುರಿತು ಮಾತನಾಡಿದ ಹಲಗೂರು ಲಯ್ಸ್ ಕ್ಲಬ್ ಅಧ್ಯಕ್ಷ ಗುಣೇಶ್ ಅವರು, ಪ್ರವಾಸಿಗರು ಯಾವುದೇ ಅಕ್ರಮ ಚಟುವಟಿಕೆ ನಡೆಸದೆ ಭಕ್ತಿಯಿಂದ ದೇವರ ದರ್ಶನ ಮಾಡಿ ಸುರಕ್ಷಿತವಾಗಿ ತೆರಳಬೇಕು ಎಂದು ಮನವಿ ಮಾಡಿದರು.
ಮುತ್ತತ್ತಿಯ ಪ್ರವಾಸಿ ತಾಣಗಳಿಗೆ ಬಂದು ಮದ್ಯಪಾನ ಮಾಡುವುದು ಅಪರಾಧವಾಗಿದೆ. ಕಾವೇರಿ ನದಿಯಲ್ಲಿ ಸಾವು-ನೋವುಗಳನ್ನು ತಪ್ಪಿಸುವ ಸಲುವಾಗಿ ಪ್ರತಿ ರಜಾ ದಿನ ಹಾಗೂ ಪ್ರತಿ ಭಾನುವಾರ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸ್ವಾಗತಾರ್ಹ ಎಂದರು.
