ಬೆಂಗಳೂರು, ಜು.9- ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ಗೆ ಅವಕಾಶ ಮಾಡಿಕೊಡಬೇಕೆಂಬ ಅಭಿಪ್ರಾಯವಿದೆ ಎಂದರು.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಗಿನ್ನಿಸ್ ದಾಖಲೆಗಾಗಿ ಜಿಬಿಎ ಮತ್ತು ಬಿಡಿಎ ವತಿಯಿಂದ ನೆಟ್ಟಿರುವ ಸಸಿಗಳಿಗೆ ಚೊಂಬಿನಲ್ಲಿ ನೀರು ಬಿಡುತ್ತಿರಬೇಕು ಎಂದು ವ್ಯಂಗ್ಯವಾಡಿದರು.ಭತ್ತ ನಾಟಿ ಮಾಡುವವರನ್ನು ಕರೆತಂದು ಸಸಿ ನೆಡೆಸಿರಬೇಕು. ಈಗ ಅವು ಒಣಗುತ್ತಿವೆ. ಸುಮಾರು 60 ರಿಂದ 62 ಕೋಟಿ ರೂ. ಖರ್ಚು ಮಾಡಿದ್ದ ಬಿಡಿಎ ಎಲ್ಲಿ ಹೋಗಿದೆ? ಎಂದು ಪ್ರಶ್ನಿಸಿದರು.
ಕುದುರೆಮುಖ ಉಕ್ಕು ಕಾರ್ಖಾನೆಯನ್ನು ಪುನರಾರಂಭ ಮಾಡಲು 1,600 ಕೋಟಿ ರೂ. ಬಂಡವಾಳ ಹೂಡಿಕೆಗೆ ಸಹಿ ಹಾಕಲಾಗಿದೆ. ಆದರೆ ಅದಕ್ಕೆ ಅಡ್ಡಿಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ರಾಜ್ಯಸರ್ಕಾರದ ವಿರುದ್ಧ ಆರೋಪಿಸಿದರು.
