ಬೆಂಗಳೂರು,ಜು.23- ಪ್ರತಿಭಾವಂತ ನಿರುದ್ಯೋಗಿ ಯುವಕರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೊಂದು ಬ್ರಹಾಂಡ ಭ್ರಷ್ಟಾಚಾರ ಬಯಲಾಗಿದೆ.ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಗೋಲಾಲ್ ನಡೆದಿದ್ದು, ಒಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ! :
ರಾಜ್ಯದಲ್ಲಿ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ (342 ಸಾಮಾನ್ಯ + 58 ಬ್ಯಾಕ್ಲಾಗ್) ಕಳೆದ ಜನವರಿ 8 ರಂದು ಲಿಖಿತ ಪರೀಕ್ಷೆ ನಡೆದಿತ್ತು. ಇತ್ತೀಚೆಗಷ್ಟೇ, ಅಂದರೆ ಜುಲೈ 17 ರಂದು ಇದರ ಫಲಿತಾಂಶ ಹೊರಬಿದ್ದಿತ್ತು.
ಆದರೆ, ಫಲಿತಾಂಶ ನೋಡಿದ ನೈಜ ಆಕಾಂಕ್ಷಿಗಳು ದಿಗ್ಭ್ರಮೆಗೊಳಗಾಗಿದ್ದಾರೆ. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಮಾನತಾದ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಕೈವಾಡ ಈ ಹಗರಣದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಡಿಯೋದಲ್ಲಿ ಸಿಕ್ಕಿಬಿದ್ದ ಮಧ್ಯವರ್ತಿ! :
ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುವಂತೆ ಮಧ್ಯವರ್ತಿಗಳ ಡೀಲಿಂಗ್ನ ಎಕ್್ಸಕ್ಲೂಸಿವ್ ವಿಡಿಯೋವೊಂದು ಲಭ್ಯವಾಗಿದೆ. ಮೊಹಮದ್ ಆರಿಫ್ ಎಂಬ ಮಧ್ಯವರ್ತಿಯು ಕಾಂತಕುಮಾರ್ ಎಂಬುವವರ ಜೊತೆ ಫೋನ್ ಕರೆಯಲ್ಲಿ ನೇರವಾಗಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಒಂದೊಂದು ಪೋಸ್ಟ್ಗೂ ಲಕ್ಷ ಲಕ್ಷ ಹಣದ ಚೌಕಾಸಿ ನಡೆದಿರುವುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ.
ವಿಧಾನಸೌಧ ಠಾಣೆ ಮೆಟ್ಟಿಲೇರಿದ ಅಭ್ಯರ್ಥಿಗಳು :
ಪರೀಕ್ಷೆ ಬರೆದು ಹಗಲಿರುಳು ಕಷ್ಟಪಟ್ಟಿದ್ದ ವೆಟರ್ನರಿ ಡಾಕ್ಟರ್ಸ್ ಈಗ ಆಕ್ರೋಶಗೊಂಡಿದ್ದಾರೆ. ಈ ಭಾರೀ ಅಕ್ರಮದ ವಿರುದ್ಧ ಸಿಡಿದೆದ್ದಿರುವ 50ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಕಾಂಕ್ಷಿಗಳ ಪ್ರಮುಖ ಬೇಡಿಕೆಗಳೇನು? :
ಹಣವಿದ್ದವರಿಗೆ ಮಾತ್ರ ಕೆಪಿಎಸ್ಸಿಯಲ್ಲಿ ಕೆಲಸ ಸಿಗುವುದಾದರೆ ನಾವೇಕೆ ಓದಬೇಕು ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ಈಗ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಪಾರದರ್ಶಕವಾಗಿ ಮರು ಪ್ರಕ್ರಿಯೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
