ಬೆಂಗಳೂರು, ಸೆ.9- ಬ್ಲಾಕ್ಮೇಲ್ಗೆಲ್ಲಾ ಹೆದರುವುದಿಲ್ಲ. ನನ್ನ ಹಿಂದೆ ಕಾಂಗ್ರೆಸ್ ಸೇನೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯ 5ನೇ ವಾರ್ಷಿಕೋತ್ಸವ ಅಂಗವಾಗಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪತ್ರಿಕಾಗೋಷ್ಠಿ ಮಾಡಿದರೆ ದೇಶವೇ ಅಲ್ಲೋಲಕಲ್ಲೋಲವಾಗುತ್ತದೆ ಎಂದು ಕೆಲ ನಾಯಕರು ಹೇಳುತ್ತಾರೆ. ನಾನು ಅದಕ್ಕೆಲ್ಲ ಹೆದರುವುದಿಲ್ಲ. ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಇಂತಹದ್ದನ್ನೆಲ್ಲಾ ನಾವು ನೋಡಿದ್ದೇವೆ ಎಂದರು.
ನಾಳೆ ರಾಜ್ಯ ಸರ್ಕಾರಕ್ಕೆ 100 ದಿನ ತುಂಬಲಿದೆ. 50 ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡಬೇಕೆಂಬ ಉದ್ದೇಶವಿತ್ತು. ಬರ ಇರುವ ಕಾರಣಕ್ಕಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಚಿಕ್ಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದನ್ನೇ ಆಹ್ವಾನ ಎಂದು ಪರಿಗಣಿಸಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಎಲ್ಲಾ ವರ್ಗದ ಅಭಿವೃದ್ಧಿಗೆ ನಾಳೆ ಹೊಸ ಯೋಜನೆಗಳನ್ನು ಘೋಷಿಸುತ್ತೇವೆ ಎಂದರು.
ಬಿಜೆಪಿಯವರು ಪಾದಯಾತ್ರೆ ಮಾಡಿದ್ದಾರೆ. ನಾನು ಸುಮನೆ ಇರುವುದಿಲ್ಲ. ಹಿಂದೆ ಮೈಸೂರು ಪಾದಯಾತ್ರೆಗೆ ತಕ್ಕ ಉತ್ತರ ನೀಡಿದ್ದೆ. ಆ ವೇಳೆ ನಮ ನಾಯಕರ ವಿರುದ್ಧ ಮಾಡಿದ್ದ ಆರೋಪ ಸುಳ್ಳು ಎಂದು ನಂತರ ಸಾಬೀತಾಯಿತು. ಬಳ್ಳಾರಿ ಪಾದಯಾತ್ರೆಗೂ ಅದೇ ರೀತಿ ತಕ್ಕ ಉತ್ತರ ನೀಡುತ್ತೇನೆ ಎಂದರು.
2028ರ ವಿಧಾನಸಭೆ, 2029ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದ ಅವರು, ಬಿಜೆಪಿ-ಜೆಡಿಎಸ್ನವರಿಗೆ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿರುವುದನ್ನು ಸಹಿಸಲಾಗುತ್ತಿಲ್ಲ. ಕೆಪಿಎಸ್ಸಿ ನೇಮಕಾತಿ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಇದು ಕಾಂಗ್ರೆಸ್ನ ಕಾರ್ಯಕ್ರಮವಲ್ಲ. ನೊಂದವರ, ಯುವಕರ, ರೈತರ, ಮಹಿಳೆಯರು ಅನುಭವಿಸಿದ ನೋವುಗಳಿಗೆ ಪರಿಹಾರ ಒದಗಿಸುವ ಅಭಿಯಾನವಾಗಿತ್ತು. ದೇಶದ ಐಕ್ಯತೆ, ಸಮಗ್ರತೆ, ಜನರ ನೋವುಗಳಿಗೆ ಸ್ಪಂದನೆ ದೊರಕಿತು ಎಂದರು. ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಿರುವ ಬಗ್ಗೆ ವಿವರಣೆ ನೀಡಿದ ಅವರು, ಭಾರತ್ ಜೋಡೋ ಟ್ರಸ್ಟ್ನಿಂದ ರಾಜಕೀಯವಾಗಿ ನಾಯಕತ್ವ ಮತ್ತು ಕಾಂಗ್ರೆಸ್ನ ಆಶಯಗಳನ್ನು ತಿಳಿಸುವ ತರಬೇತಿ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಲಾಗಿದೆ ಎಂದರು.
ಭಾರತ್ ಜೋಡೋ ಯಾತ್ರೆಯನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಅದರ ಹೆಸರಿನಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಭಾರತ್ ಜೋಡೋ ಯುವಸಂಘಕ್ಕೆ ಆನ್ಲೈನ್ನಲ್ಲಿ 7.80 ಲಕ್ಷ ನೋಂದಣಿಯಾಗಿದ್ದಾರೆ. ಇದು ಸಾಲುವುದಿಲ್ಲ. ಆಫ್ಲೈನ್ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಗ್ರಾಪಂ ಮಟ್ಟದಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿಗೆ ತಲಾ 6 ಜನ ಸದಸ್ಯರನ್ನು ವಾರದೊಳಗೆ ನೇಮಕಾತಿ ಮಾಡಲಾಗು ವುದು. ಪ್ರತಿ ತಾಲ್ಲೂಕಿನಲ್ಲೂ 250 ರಿಂದ 300 ಜನ ಆಯ್ಕೆಯಾಗಿ, ಸರ್ಕಾರದ ಗೌರವ ಪಡೆಯಲಿದ್ದಾರೆ ಎಂದು ವಿವರಿಸಿದರು. ಪ್ರತಿಭೆ ಯಾರ ಸ್ವತ್ತು ಅಲ್ಲ, ಹಳ್ಳಿ ಹುಡುಗ ಗಿಲ್ಲಿ ನಟ ಇದಕ್ಕೆ ಉದಾಹರಣೆ. ಭಾರತ್ ಜೋಡೋ ಪ್ರತಿಭಾನ್ವೇಷಣೆಯ ವೇದಿಕೆಯಾಗಲಿದೆ ಎಂದರು.
ಯಾತ್ರಿಗಳಿಗೆ ಗೌರವ:
ಕನ್ಯಾಕುಮಾರಿಯಿಂದ ಕಾಶೀರದವರೆಗೂ ರಾಹುಲ್ ಗಾಂಧಿಯವರು ನಡೆಸಿದ ಪಾದಯಾತ್ರೆಯಲ್ಲಿ ಅರಂಭದಿಂದ ಕೊನೆಯವರೆಗೆ ಪಾಲ್ಗೊಂಡಿದ್ದ 8 ಜನರ ಪೈಕಿ 6 ಜನರನ್ನು ವೇದಿಕೆಯಲ್ಲಿ ಕೂರಿಸಿ ಸನಾನಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಪಕ್ಷದ ಬದ್ಧತೆ ವಿಚಾರವಾಗಿ ಈ 6 ಜನರನ್ನು ನೋಡಿ ನಾವು ಕಲಿಯಬೇಕಿದೆ. ಅದಕ್ಕಾಗಿ ಇಂದಿನ ಕಾರ್ಯಕ್ರಮದಲ್ಲಿ ಅವರೇ ಕೇಂದ್ರ ಬಿಂದುಗಳು. ನಾವು ಕೆಳಗೆ ಕೂರುತ್ತೇವೆ. ಯಾತ್ರೆ ಪೂರ್ತಿ ಭಾಗವಹಿಸಿದ್ದವರು ಮಾತ್ರ ಗಣ್ಯ ಅತಿಥಿಗಳಾಗಿ ಆಸೀನರಾಗಿರುತ್ತಾರೆ. ನಾನು ಮತ್ತು ಮುಖ್ಯಮಂತ್ರಿಯವರು ಕಾರ್ಯಕರ್ತರಂತೆ ವೇದಿಕೆ ಮುಂಭಾಗದಲ್ಲಿ ಕೂರುತ್ತೇವೆ ಎಂದು ಹೇಳಿ ಕೆಳಗೆ ಇಳಿದು ಹೋದರು.
