ಮನೆಯೊಂದರ ಮೇಲೆ ದುಷ್ಕರ್ಮಿಗಳ ದಾಳಿ : ಸಮಯಪ್ರಜ್ಞೆಯಿಂದ ಬದುಕಿದ ಕುಟುಂಬ
ಬೆಂಗಳೂರು,ಜು.25- ಮನೆಯೊಂದರ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಮಾರಕಾಸಗಳಿಂದ ಕಿಟಕಿ ಹಾಗೂ ಕಾರಿನ ಗಾಜುಗಳನ್ನು ಪುಡಿ-ಪುಡಿ ಮಾಡಿ ಬಾಗಿಲು ಧ್ವಂಸಗೊಳಿಸಲು ಯತ್ನಿಸಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಮೈಲಸಂದ್ರ ಸಮೀಪದ ವಡ್ಡರಪಾಳ್ಯ ನಿವಾಸಿ ವಿಶ್ವನಾಥ ರೆಡ್ಡಿ ಎಂಬುವವರ ಮನೆ ಮೇಲೆ ಈ ದಾಳಿ ನಡೆದಿದೆ.
ರಾತ್ರಿ ಊಟ ಮಾಡಿ 11 ಗಂಟೆ ಸುಮಾರಿನಲ್ಲಿ ವಿಶ್ವನಾಥ ರೆಡ್ಡಿ ಅವರು ಪತ್ನಿ ಹಾಗೂ ಸೊಸೆಯೊಂದಿಗೆ ಮನೆಯ ಹೊರಗಡೆ ಮಾತನಾಡುತ್ತಾ ಕುಳಿತಿದ್ದರು.ಆ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಐದಾರು ಮಂದಿ ದುಷ್ಕರ್ಮಿಗಳು ಮಾರಕಾಸಗಳನ್ನು ಹಿಡಿದು ಇವರ ಮನೆ ಬಳಿ ಬರುತ್ತಿರುವುದನ್ನು ಗಮನಿಸಿದ ವಿಶ್ವನಾಥ ರೆಡ್ಡಿ ಕುಟುಂಬ ಗಾಬರಿಗೊಂಡು ತಕ್ಷಣ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.
ತಕ್ಷಣ ದುಷ್ಕರ್ಮಿಗಳು ಮನೆಯ ಬಾಗಿಲನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ರೊಚ್ಚಿಗೆದ್ದು ಮಾರಕಾಸಗಳಿಂದ ಕಿಟಕಿ ಗಾಜು ಒಡೆದಿದ್ದಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನೂ ಸಹ ಪುಡಿ ಪುಡಿ ಮಾಡಿದ್ದಾರೆ. ಅಲ್ಲದೇ ಬೈಕ್ ಮೇಲೂ ಸಹ ತಮ್ಮ ರೋಷ ತೋರಿಸಿದ್ದಲ್ಲದೇ ಸಮೀಪದ ಬಟ್ಟೆ ಅಂಗಡಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಯಿಂದ ಸ್ಥಳೀಯರು ಹಾಗೂ ವಿಶ್ವನಾಥ ರೆಡ್ಡಿ ಕುಟುಂಬದವರು ಆತಂಕಗೊಂಡಿದ್ದಾರೆ. ಒಂದು ವೇಳೆ ಬಾಗಿಲು ತೆಗೆದಿದ್ದರೆ ಕೊಲೆ ನಡೆಯುತ್ತಿತ್ತು. ಕೊಲೆ ಮಾಡಲು ಬಂದಿದ್ದವರು ಯಾರು ಎಂಬುವುದು ಗೊತ್ತಿಲ್ಲ. ನಮಗೆ ಯಾರ ಜೊತೆಯೂ ದ್ವೇಷವಿಲ್ಲವೆಂದು ವಿಶ್ವನಾಥ ರೆಡ್ಡಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಬನ್ನೇರುಘಟ್ಟ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ವಿಶ್ವನಾಥ ರೆಡ್ಡಿ ಅವರ ಸೊಸೆ ಮನೆಯವರು ಜಮೀನು ವಿಚಾರಕ್ಕೆ ಇವರ ಮನೆ ಬಳಿ ಬಂದು ದಾಂಧಲೆ ನಡೆಸಿರಬಹುದೆಂಬ ಶಂಖೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾರಕಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ರೌಡಿ ಬಂಧನ
ಬೆಂಗಳೂರು,ಜು.25- ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ರೌಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮಧುಸೂದನ್ ಅಲಿಯಾಸ್ ಕತ್ರಿ (33) ಬಂಧಿತ ರೌಡಿ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಈತ ಕಾಡುಬೀಸನಹಳ್ಳಿಯ ರೌಡಿಯೊಬ್ಬನ ಸಹಚರ.
ಸಹಕಾರ ನಗರದ ಜಿಕೆವಿಕೆ ರಸ್ತೆಯ ಎಲ್ ಅಂಡ್ ಟಿ ರೈನ್ ಟ್ರೀ ಬ್ಲೋವರ್ಡ್ ಬಳಿ ಲಾಂಗ್ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಹೋಗುತ್ತಿದ್ದನು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ಮೇರೆಗೆ ಇನ್್ಸಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಅವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ರೌಡಿಯನ್ನು ಮಾರಕಾಸ್ತ್ರ ಸಮೇತ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನುವಿಚಾರಣೆಗೊಳಪಡಿಸಿದಾಗ ಇನ್ನೂ ಕೆಲವು ಮಾರಕಾಸ್ತ್ರಗಳನ್ನು ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ.
ಈ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ವಿರುದ್ಧ ಶಸಾ್ತ್ರಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನ ಮನೆಯಲ್ಲಿಟ್ಟಿದ್ದ ಎಂಟು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರೌಡಿ ಮಧುಸೂದನ್ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಎಂಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
