ಬೆಂಗಳೂರು,ಆ.11-ಪಂಚತಾರ ಹೋಟೆಲ್ನಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಆತಹತ್ಯೆಗೆ ಯತ್ನಿಸಿದ ಇಮ್ರಾನ್ (40) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.ನಾಗವಾರ ಮುಖ್ಯ ರಸ್ತೆಯ ಬಿಲ್ಲಾಲ್ ನಗರದ ನಿವಾಸಿ, ಖಾಸಗಿ ಕಂಪನಿಯೊಂದರ ನೌಕರ ಇಮ್ರಾನ್ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದರು.
ಇತ್ತೀಚೆಗೆ ಪತ್ನಿಯ ಮೇಲೆ ಅನುಮಾನದಿಂದ ಜಗಳ ಉಂಟಾಗಿ ಇಮ್ರಾನ್ ಬೇರೆಯಾಗಿದ್ದರು. ಇಬ್ಬರು ಮಕ್ಕಳು ವಾರದಲ್ಲಿ ಮೂರು ದಿನ ಇಮ್ರಾನ್ ಜೊತೆ, ಉಳಿದ ನಾಲ್ಕು ದಿನ ಪತ್ನಿ ಜೊತೆ ಇರುವಂತೆ ಎರಡು ಕಡೆಯ ಸಂಬಂಧಿಕರು ತೀರ್ಮಾನಿಸಿದರು.
ಅದರಂತೆ ಶುಕ್ರವಾರ ಇಬ್ಬರು ಮಕ್ಕಳನ್ನು ತನ್ನ ಜೊತೆ ಕರೆದುಕೊಂಡು ಬಂದ ಇಮ್ರಾನ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ತಾಜ್ ಹೋಟೆಲ್ನಲ್ಲಿ ರೂಮ್ ಬಾಡಿಗೆ ಪಡೆದು ವಾಸವಾಗಿದ್ದ.
ಈ ಸಂದರ್ಭದಲ್ಲಿ ಆತ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ತಾನು ಕುತ್ತಿಗೆ ಕೊಯ್ದುಕೊಂಡು ಆತಹತ್ಯೆಗೆ ಯತ್ನಿಸಿದ್ದ. ಸೋಮವಾರ ಮಧ್ಯಾಹ್ನ ರೂಮ್ ಖಾಲಿ ಮಾಡಬೇಕಾಗಿತ್ತು. ಆದರೆ ನಾಲ್ಕು ಗಂಟೆಯಾದರೂ ಅವರು ಹೊರಗೆ ಬಾರದೆ ಇದ್ದಾಗ ಹೋಟೆಲ್ ಸಿಬ್ಬಂದಿ ಕರೆ ಮಾಡಿದರೂ ಪ್ರತಿಕ್ರಿಯಿಸಿಲ್ಲ.
ಆದ್ದರಿಂದ ಹೋಟೆಲ್ ಸಿಬ್ಬಂದಿ ರೂಮ್ ಬಳಿ ಬಂದು ಬಾಗಿಲು ಬಡಿದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೊಂದು ಕೀ ಯಿಂದ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಇಮ್ರಾನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಮಂಚದ ಮೇಲೆ ಇಬ್ಬರು ಮಕ್ಕಳು ಮೃತಪಟ್ಟಿರುವುದು ಗೊತ್ತಾಗಿದೆ.
ಪೊಲೀಸರಿಗೆ ಸುದ್ದಿ ತಿಳಿಸಿದ ಹೋಟೆಲ್ ಸಿಬ್ಬಂದಿ ಕೂಡಲೇ ಇಮ್ರಾನ್ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ತನ್ನ ಮಕ್ಕಳನ್ನು ಕೊಲೆ ಮಾಡುವ ಮುನ್ನ ಇಮ್ರಾನ್ ಪತ್ರವೊಂದು ಬರೆದಿದ್ದು, ಮಕ್ಕಳ ಹತ್ಯೆ ಮತ್ತು ತಾನು ಆತಹತ್ಯೆಗೆ ಯತ್ನಿಸಿದ ಕಾರಣಗಳನ್ನು ಉಲ್ಲೇಖಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
