ಬೆಂಗಳೂರು,ಆ.16-ಶಿವಗಂಗೆ ಬೆಟ್ಟದಲ್ಲಿ ಕಾಣೆಯಾಗಿದ್ದಾನೆ ಎಂದು ಹೇಳಲಾಗಿರುವ ಸಾಫ್ಟ್ ವೇರ್ ಇಂಜಿನಿಯರ್ ಅದ್ವೈತ್ ಅಪಹರಣವಾಗಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.ಈ ನಿಟ್ಟಿನಲ್ಲಿ ದಾಬಸ್ಪೇಟೆ ಹಾಗೂ ಕಾಡುಗೋಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದು ವಾರದ ಹಿಂದೆ ಶಿವಗಂಗೆ ಬೆಟ್ಟಕ್ಕೆ ನಗರದಿಂದ ಟರ್ಕಿಂಗ್ಗೆ ಹೋಗಿದ್ದ ಅದ್ವೈತ್ ನಿಗೂಢವಾಗಿ ನಾಪತ್ತೆಯಾಗಿದ್ದಾನೆ.
ನೆಲಮಂಗಲ ಉಪವಿಭಾಗದ ಪೊಲೀಸರು ಹಾಗೂ ಕಾಡುಗೋಡಿ ಠಾಣೆ ಪೊಲೀಸರು, ಅರಣ್ಯ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಒಟ್ಟು 80ಕ್ಕೂ ಹೆಚ್ಚು ಮಂದಿ ಬೆಟ್ಟದಲ್ಲಿ ಸತತ ಶೋಧ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.
ತಾಂತ್ರಿಕವಾಗಿ ತನಿಖೆ ಕೈಗೊಂಡಾಗ ಆತನ ಮೊಬೈಲ್ ಫೋನ್ನ ಕೊನೆಯ ಲೊಕೇಶನ್ ಕುದೂರು ಬಳಿ ಪತ್ತೆಯಾಗಿದೆ. ಕಾಡುಗೋಡಿಯಿಂದ ಆತ ತೆಗೆದುಕೊಂಡು ಹೋಗಿದ್ದ ಬೈಕ್ ಬೆಟ್ಟದ ಬುಡದಲ್ಲೇ ಇದೆ. ಎಲ್ಲವೂ ಗೊಂದಲವಾಗಿದೆ.
ಆದರೆ ಇಲ್ಲಿಯತನಕ ಆತ ತನ್ನ ಕುಟುಂಬದವರು ಅಥವಾ ಸ್ನೇಹಿತರು, ಬಂಧುಬಳಗದವರನ್ನು ಸಂಪರ್ಕಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ. ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲಸಿದಾಗ ಕೋಟ್ಯಂತರ ರೂ. ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆತ ಅಪಹರಣವಾಗಿರಬಹುದೆಂದು ಶಂಕಿಸಲಾಗಿದೆ.
