ಬೆಂಗಳೂರು, ಆ.17- ಬಿಜೆಪಿ ಆರ್ಎಸ್ಎಸ್ ಮುಖಂಡ ಬಿ.ಎಲ್. ಸಂತೋಷ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಬಳಸಿರುವ ಪದಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಲ್. ಸಂತೋಷ್ ಅವರು ಆರ್ಎಸ್ಎಸ್ ಸಂಘಟನೆಯಿಂದ ಮೇಲೆ ಬಂದವರು. ಅವರಿಗೆ ಈಗ ಸುಮಾರು 59 ವರ್ಷ ವಯಸ್ಸು. ಇತ್ತೀಚೆಗೆ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಮಹಾತ ಗಾಂಧೀಜಿ ಅಲಂಕರಿಸಿದ್ದ ಸ್ಥಾನದಲ್ಲಿ ಕುಳಿತಿರುವ ಶ್ರೇಷ್ಠ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ. ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಂತಹ ಹಿರಿಯ ನಾಯಕನಿಗೆ ಗೌರವ ನೀಡಬೇಕು ಎಂಬ ಕನಿಷ್ಠ ಸಾಮಾನ್ಯ ಜ್ಞಾನ ಬಿ.ಎಲ್. ಸಂತೋಷ್ ಅವರಿಗೆ ಇರಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದರು.
ಖರ್ಗೆ ಅವರ ಬಗ್ಗೆ ಮಾತನಾಡುವಾಗ ಅವನು, ಅವನ ಅಪ್ಪ ಎಂಬ ರೀತಿಯ ಏಕವಚನದ ಪದಗಳನ್ನು ಬಳಸಿರುವುದು ಸರಿಯಲ್ಲ. ಖರ್ಗೆ ಅವರು ನಿಮಗಿಂತ ಹಿರಿಯರು ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದು ತಿರುಗೇಟು ನೀಡಿದರು.
ಸಿ.ಟಿ. ರವಿ ವಿರುದ್ಧವೂ ವಾಗ್ದಾಳಿ:
ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧವೂ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು. ಸಿ.ಟಿ. ರವಿ ಅವರ ಹೆಸರಿನ ವಿರುದ್ಧಾರ್ಥಕ ಪದ ಯಾವುದು ಎಂದು ಗೂಗಲ್ನಲ್ಲಿ ಹುಡುಕುತ್ತಿದ್ದೆ. ಅವರ ವಿರುದ್ಧಾರ್ಥಕ ಪದ ಒಳ್ಳೆಯತನ ಎಂದು ವ್ಯಂಗ್ಯವಾಡಿದರು.ಸಿ.ಟಿ. ರವಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮಾತಿನ ಶೈಲಿಯನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿ.ಎಲ್. ಸಂತೋಷ್ ಅವರು ಇತ್ತೀಚಿನ ಭಾಷಣದಲ್ಲಿ ನಂಬಿಕೆಯಿಂದ ಆರ್ಎಸ್ಎಸ್ ನಡೆಸುತ್ತಿದ್ದೇವೆ, ನಮಗೆ ನೋಂದಣಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದೇಶದ ಕಾನೂನಿನ ಬಗ್ಗೆ ನಿಮಗೆ ಗೌರವವಿಲ್ಲವೇ? ಆದಾಯ ತೆರಿಗೆ ಕಾಯ್ದೆಯ ಬಗ್ಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂಬಂತಾಗಿದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಬಿ.ಎಲ್. ಸಂತೋಷ್ ಅವರು ಏಕವಚನದಲ್ಲಿ ಮಾತನಾಡಿರುವುದನ್ನು ಪ್ರಶ್ನಿಸಿದ ಪ್ರದೀಪ್ ಈಶ್ವರ್, ನನಗೆ 40 ವರ್ಷ, ಬಿ.ಎಲ್. ಸಂತೋಷ್ ಅವರಿಗೆ ಸುಮಾರು 58 ವರ್ಷ. ಆದರೂ ನಾನು ಅವರನ್ನು ಗೌರವದಿಂದ ಸರ್ ಎಂದು ಕರೆಯುತ್ತಿದ್ದೇನೆ. ಹಿರಿಯರಿಗೆ ಗೌರವ ನೀಡುವುದು ನಮ ಸಂಸ್ಕೃತಿ ಎಂದು ಹೇಳಿದರು.
