Homeರಾಜ್ಯಖರ್ಗೆ ಭಾಷಣ ಮಾಡಿದ ಸ್ಥಳದ ಶುದ್ಧೀಕರಣ ಘಟನೆ ಸಂವಿಧಾನಕ್ಕೆ ಮಾಡಿದ ಅಪಮಾನ : ಸಚಿವ ಕೆ.ಹೆಚ್‌.ಮುನಿಯಪ್ಪ

ಖರ್ಗೆ ಭಾಷಣ ಮಾಡಿದ ಸ್ಥಳದ ಶುದ್ಧೀಕರಣ ಘಟನೆ ಸಂವಿಧಾನಕ್ಕೆ ಮಾಡಿದ ಅಪಮಾನ : ಸಚಿವ ಕೆ.ಹೆಚ್‌.ಮುನಿಯಪ್ಪ

ಬೆಂಗಳೂರು, ಆ.19- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಸಮಾಜ ಕಲ್ಯಾಣ ಸಚಿವ ಕೆ.ಹೆಚ್‌. ಮುನಿಯಪ್ಪ ಹೇಳಿದರು.

ವಿಧಾನಸಭೆಯಲ್ಲಿ ಸದಸ್ಯರಾದ ಶರತ್‌ ಬಚ್ಚೇಗೌಡ ಹಾಗೂ ಡಾ. ಎನ್‌.ಟಿ. ಶ್ರೀನಿವಾಸ್‌ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿರುವ ‘ಶುದ್ಧೀಕರಣ’ ಘಟನೆ ಅತ್ಯಂತ ಗಂಭೀರ ಸಾಮಾಜಿಕ ಹಾಗೂ ಸಂವಿಧಾನಾತ್ಮಕ ವಿಷಯವಾಗಿದೆ ಎಂದರು.

ಆಗಸ್ಟ್‌ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ರ‍್ಯಾಲಿಯನ್ನು ಮಲ್ಲಿಕಾರ್ಜುನ ಖರ್ಗೆ ಉದ್ದೇಶಿಸಿ ಮಾತನಾಡಿದ್ದರು. ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿ ‘ಶುದ್ಧೀಕರಣ’ ಹವನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಅತ್ಯಂತ ಖಂಡನೀಯ ಎಂದು ಮುನಿಯಪ್ಪ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆ ಸಲ್ಲಿಸಿರುವ ಹಿರಿಯ ರಾಷ್ಟ್ರೀಯ ನಾಯಕರು. ಪ್ರಸ್ತುತ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡಿರುವ ಅವರು ಸಂವಿಧಾನದ ಮೌಲ್ಯಗಳನ್ನು ಸದಾ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಆಗಸ್ಟ್‌ 13ರಂದು ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಖರ್ಗೆ ಅವರು, ತಾವು ಅಸ್ಪೃಶ್ಯತೆಯ ನೋವನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ಈ ಘಟನೆ ತಮ್ಮನ್ನು ಅವಮಾನಿಸಿದಂತಾಗಿದೆ ಎಂದು ನೋವು ಹಂಚಿಕೊಂಡಿದ್ದ ಅವರು, ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ರಾಜ್ಯಸಭೆಯಲ್ಲೇ ಬಿಜೆಪಿ ನಾಯಕರು ಘಟನೆಯನ್ನು ಖಂಡಿಸಿದ್ದರು. ಸದನದ ನಾಯಕ ಜೆ.ಪಿ. ನಡ್ಡಾ ಅವರು ಘಟನೆ ದುರದೃಷ್ಟಕರವಾಗಿದ್ದು, ಇಂತಹ ಆಚರಣೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದ ಅವರು, ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು ಎಂದು ತಿಳಿಸಿದ್ದರು.

ಸಭಾಪತಿಯವರೂ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಸ್ಪೃಶ್ಯತೆ ಸಹಿಸಲಾಗದ ಸಾಮಾಜಿಕ ಪಿಡುಗು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಘಟನೆ ಕುರಿತು ತನಿಖೆ ನಡೆಯಬೇಕು ಹಾಗೂ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಬೇಕು ಎಂಬ ಕಳವಳ ಸದನದಲ್ಲಿ ವ್ಯಕ್ತವಾಗಿತ್ತು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಘಟನೆಯನ್ನು ಖಂಡಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ರಾಹುಲ್‌ ಗಾಂಧಿ ಹೇಳಿದ್ದರೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ಮೊದಲು ಮನಸ್ಸನ್ನು ಶುದ್ಧೀಕರಿಸಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದರು.

ಅಂಬೇಡ್ಕರ್‌ರಿಂದ ಖರ್ಗೆಯವರವರೆಗೆ

ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಬಾಲ್ಯದಲ್ಲೇ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯದ ಅವಮಾನ ಅನುಭವಿಸಿದ್ದರು. ಕುಡಿಯುವ ನೀರಿಗೂ ನಿರ್ಬಂಧ ಎದುರಿಸಿದ್ದ ಅವರು ಆ ನೋವನ್ನೇ ಹೋರಾಟವಾಗಿ ಪರಿವರ್ತಿಸಿ ಮಹಾಡ್‌ ಸತ್ಯಾಗ್ರಹ ಮುನ್ನಡೆಸಿದರು. ಬಳಿಕ ಸಂವಿಧಾನದ ಮೂಲಕ ಸಮಾನತೆಗೆ ಕಾನೂನಿನ ಬಲ ನೀಡಿದರು.

ಸಂವಿಧಾನದ ಅನುಚ್ಛೇದ 17 ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಅಸ್ಪೃಶ್ಯತೆಯ ಆಚರಣೆ ಕಾನೂನುಬಾಹಿರವಾಗಿದ್ದು, ಪ್ರತಿಯೊಬ್ಬರ ಮಾನವ ಘನತೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮುನಿಯಪ್ಪ ಹೇಳಿದರು.

ಮಾಜಿ ಉಪಪ್ರಧಾನಿ ಜಗಜೀವನರಾಮ್‌ ಅವರೂ ಬಾಲ್ಯದಲ್ಲೇ ಅಸ್ಪೃಶ್ಯತೆಯ ಅವಮಾನ ಅನುಭವಿಸಿದ್ದರು. ಪ್ರತ್ಯೇಕ ನೀರಿನ ಮಡಕೆ ಇಟ್ಟಿರುವುದನ್ನು ವಿರೋಧಿಸಿ ಜಾತಿ ತಾರತಮ್ಯವನ್ನು ಪ್ರಶ್ನಿಸಿದ್ದರು. ಉನ್ನತ ಹುದ್ದೆ ಅಲಂಕರಿಸಿದರೂ ಜಾತಿ ಆಧಾರಿತ ಅವಮಾನದಿಂದ ಅವರು ಮುಕ್ತರಾಗಿರಲಿಲ್ಲ ಎಂದು ಹೇಳಿದರು.

ವಾರಾಣಸಿಯಲ್ಲಿ ಜಗಜೀವನರಾಮ್‌ ಅವರು ಡಾ. ಸಂಪೂರ್ಣಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಗಂಗಾಜಲದಿಂದ ಪ್ರತಿಮೆಯ ‘ಶುದ್ಧೀಕರಣ’ ನಡೆಸಲಾಗಿತ್ತು ಎಂಬ ಘಟನೆಯನ್ನೂ ಅವರು ಉಲ್ಲೇಖಿಸಿದರು. ಇದು ಇತಿಹಾಸದ ನೋವಿನ ಅಧ್ಯಾಯವಾಗಿದೆ ಎಂದರು.

“ಅಂಬೇಡ್ಕರ್‌ ನೀರಿಗಾಗಿ ಹೋರಾಡಿದರು. ಜಗಜೀವನರಾಮ್‌ ಜಾತಿ ಅವಮಾನ ಎದುರಿಸಿದರು. ಖರ್ಗೆಯವರು ಅದೇ ನೋವನ್ನು ಇಂದು ಹೇಳಬೇಕಾಯಿತು. ತಲೆಮಾರುಗಳು ಬದಲಾದವು, ದೇಶ ಬದಲಾಯಿತು, ಕಾನೂನು ಬದಲಾಯಿತು, ಕಾಲ ಬದಲಾಯಿತು. ಆದರೂ ಕೆಲವು ಮನಸ್ಸುಗಳು ಬದಲಾಗಿಲ್ಲ” ಎಂದು ಮುನಿಯಪ್ಪ ಹೇಳಿದರು.

ಇದು ಪಕ್ಷದ ಪ್ರಶ್ನೆಯಲ್ಲ

ಈ ಘಟನೆ ಖರ್ಗೆ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಇದು ದಲಿತರ ಸ್ವಾಭಿಮಾನದ, ಮಾನವ ಘನತೆಯ, ಸಾಮಾಜಿಕ ಸಮಾನತೆಯ ಹಾಗೂ ಸಂವಿಧಾನದ ಗೌರವದ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.

ಅಸ್ಪೃಶ್ಯತೆ ಕಾನೂನಿನಡಿ ಅಪರಾಧವಾಗಿದ್ದು, ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಹಾಗೂ ದೌರ್ಜನ್ಯ ತಡೆ ಕಾಯ್ದೆಗಳು ಜಾರಿಯಲ್ಲಿವೆ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಹೊಣೆಗಾರಿಕೆ ನಿಗದಿಪಡಿಸಬೇಕು. ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರ ಅಸ್ಪೃಶ್ಯತೆ ಹಾಗೂ ಜಾತಿ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ. ದಲಿತರ ಘನತೆ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಮಾಜ ನಿರ್ಮಾಣ ಸರ್ಕಾರದ ಸಂಕಲ್ಪವಾಗಿದೆ ಎಂದು ಹೇಳಿದರು.

“ಖರ್ಗೆಯವರು ನಿಂತ ವೇದಿಕೆ ಅಶುದ್ಧವಲ್ಲ. ಜಗಜೀವನರಾಮರ ಸ್ಪರ್ಶ ಅಶುದ್ಧವಾಗಿರಲಿಲ್ಲ. ಅಂಬೇಡ್ಕರರ ನೆರಳೂ ಅಶುದ್ಧವಾಗಿರಲಿಲ್ಲ. ಅಶುದ್ಧವಾಗಿರುವುದು ಜಾತಿವಾದಿ ಮನಸ್ಥಿತಿ ಮಾತ್ರ. ಸ್ಥಳದ ಶುದ್ಧೀಕರಣ ನಮಗೆ ಬೇಕಿಲ್ಲ; ಮನಸ್ಸಿನ ಶುದ್ಧೀಕರಣ ನಮಗೆ ಬೇಕಾಗಿದೆ. ಜಾತಿಗಿಂತ ಮಾನವೀಯತೆ ದೊಡ್ಡದಾಗಬೇಕು. ಸಮಾನತೆ ನಮ್ಮ ಬದುಕಾಗಬೇಕು. ಸಂವಿಧಾನ ನಮ್ಮ ನಡೆ ಆಗಬೇಕು” ಎಂದು ಕೆ.ಹೆಚ್‌. ಮುನಿಯಪ್ಪ ಹೇಳಿದರು.

RELATED ARTICLES
spot_img

Latest News