ಬೆಂಗಳೂರು, ಸೆ.13-ಮನೆಗೆ ತೆರಳು ಕ್ಯಾಬ್ಗಾಗಿ ಕಾಯುತ್ತಿದ್ದ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಕೊರಳಿನಿಂದ 9 ಗ್ರಾಂ ಚಿನ್ನದ ಸರವನ್ನು ಆಟೋಚಾಲಕನೊಬ್ಬ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕಳೆದ ಮಧ್ಯರಾತ್ರಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪುಟ್ಟೇನಹಳ್ಳಿಯ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಶ್ವೇತಾ ಸರ ಕಳೆದುಕೊಂಡವರು. ಇವರು ವಿದೇಶದಿಂದ ಆಗಮಿಸಿದ ಬಳಿಕ ಬಸ್ನಲ್ಲಿ ಬಂದು ಬಿ.ಜಿ.ರಸ್ತೆಯ ದೊರೆಸ್ವಾಮಿ ಪಾಳ್ಯದಲ್ಲಿ ಇಳಿದು ಅಲ್ಲಿಂದ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿ ಕಾಯುತ್ತಿದ್ದರು. ಆಗ ರಾತ್ರಿ 12.45 ರ ಸಮಯ.
ಆ ರಸ್ತೆಯಲ್ಲಿ ಬಂದ ಆಟೋ ಚಾಲಕನೊಬ್ಬ ಅವರ ಕೊರಳಿಗೆ ಕೈ ಹಾಕಿ ಸರ ಕಿತ್ತುಕೊಂಡು ಆಟೋ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಶ್ವೇತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆಟೋಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.
