ಬೆಂಗಳೂರು,ಸೆ.17- ಪ್ರತಿ ವರ್ಷ ಸೆ.17 ರಂದು ವಿಶ್ವದಾ ದ್ಯಂತ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ವಿಶ್ವಕರ್ಮರು ದೇವಶಿಲ್ಪಿ ಎಂದೇ ಪ್ರಸಿದ್ಧರು. ನಿರ್ಮಾಣ ಕೌಶಲ್ಯ, ವಾಸ್ತುಶಿಲ್ಪ, ಶಿಲ್ಪಕಲೆ, ಆಭರಣ ಕಲೆ, ಕಮಾರಿಕೆ ಇವೆಲ್ಲವನ್ನೂ ವಿಶ್ವಕರ್ಮರು ಪ್ರತಿನಿಧಿಸುತ್ತಾರೆ.
ಪುರಾಣ ಕಾಲದಲ್ಲಿ ಇಂದ್ರನ ಅಮರಾವತಿ, ಲಂಕೆಯ ರಾವಣನ ಅರಮನೆ ಮತ್ತು ಪುಸ್ಪಕವಿಮಾನವನ್ನು ನಿರ್ಮಿಸಿದ್ದು ವಿಶ್ವಕರ್ಮರೇ. ಅನಾದಿ ಕಾಲದಿಂದಲೂ ಎಂಜಿನಿಯರಿಂಗ್ ಕೌಶಲ್ಯಕ್ಕೆ ಪ್ರಸಿದ್ಧರಾಗಿರುವ ವಿಶ್ವಕರ್ಮರು ಕಮಾರಿಕೆ, ಶಿಲ್ಪಕಲೆ, ಅಕ್ಕಸಾಲಿಗಕಲೆ, ಮರಗೆಲಸ ಇತ್ಯಾದಿ ಕಸಬುಗಳ ಮೂಲಕ ಇಂದಿಗೂ ಪ್ರಸ್ತುತರಾಗಿದ್ದಾರೆ.
ಇಂದಿನ ಕಟ್ಟಡ ನಿರ್ಮಾಣದಿಂದ ಹಿಡಿದು ವಾಹನಗಳು, ಯಂತ್ರಗಳ ಬಿಡಿಭಾಗಗಳ ರಚನೆಯವರೆಗೂ ತಾಂತ್ರಿಕ ಕೌಶಲ್ಯವನ್ನು ವಿಶ್ವಕರ್ಮರು ಪ್ರತಿನಿಧಿಸುತ್ತಾರೆ. ಇಂದಿಗೂ ಕಾಶೀರದಿಂದ ಕನ್ಯಾಕುಮಾರಿವರೆಗಿನ ಸಕಲ ದೇಗುಲಗಳ ನಿರ್ಮಾಣದಲ್ಲೂ ವಿಶ್ವಕರ್ಮರ ಛಾಪು-ಹೊಳಪು ಇದೆ.
ಬೇಲೂರಿನ ಶಿಲ್ಪಕಲೆಯ ಸೊಬಗು, ತಂಜಾವೂರಿನ ಬೃಹದೀಶ್ವರ ದೇವಾಲಯದ ವಾಸ್ತುಶಿಲ್ಪದ ಮಹತ್ತು ಎಲ್ಲವೂ ವಿಶ್ವಕರ್ಮದ ಪ್ರತಿಭೆಯ ಪ್ರತಿಬಿಂಬವಾಗಿ ಆಧುನಿಕ ಶಿಲ್ಪಿಗಳು, ಕುಶಲಕರ್ಮಿಗಳಿಂದ ನಿರ್ಮಿತವಾಗಿವೆ.ನಾಡಿನ ಸಮಸ್ತ ಜನತೆಗೆ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
