Homeಇದೀಗ ಬಂದ ಸುದ್ದಿಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ 100 ಹೊಸ ವಿಮಾನ ನಿಲ್ದಾಣ: ಸಚಿವ ನಾಯ್ಡು

ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ 100 ಹೊಸ ವಿಮಾನ ನಿಲ್ದಾಣ: ಸಚಿವ ನಾಯ್ಡು

ಅಹಮದಾಬಾದ್‌‍, ಸೆ.2- ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್‌ ಅಡಿಯಲ್ಲಿ ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 100 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸುಮಾರು 30,000 ಕೋಟಿ ವೆಚ್ಚ ಮಾಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ತಿಳಿಸಿದ್ದಾರೆ. ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಭಾರತದ ಮೂರನೇ ಹಬ್‌ ಆ್ಯಂಡ್‌ ಸ್ಪೋಕ್‌ ಕಾರ್ಯಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 2014ರಲ್ಲಿ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಇಂದು ಭಾರತದ ನಕ್ಷೆಯಲ್ಲಿ 166 ವಿಮಾನ ನಿಲ್ದಾಣಗಳಿವೆ. 74ರಿಂದ 166ಕ್ಕೆ ಏರಿಕೆಯಾಗಿರುವುದು ದೇಶದ ಮಟ್ಟಿಗೆ ದಾಖಲೆಯಾಗಿದೆ. ಕಳೆದ 12 ವರ್ಷಗಳಲ್ಲಿ ಸರಾಸರಿ ಪ್ರತಿ 40 ದಿನಗಳಿಗೊಮೆ ಹೊಸ ವಿಮಾನ ನಿಲ್ದಾಣ ಅಥವಾ ಹೊಸ ಟರ್ಮಿನಲ್‌ ನಿರ್ಮಾಣ ಪೂರ್ಣಗೊಳಿಸಿದ್ದೇವೆ ಎಂದು ನಾಯ್ಡು ಹೇಳಿದರು. ಕಳೆದ 12 ವರ್ಷಗಳ ಪಯಣ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕೇವಲ ಆರಂಭವಷ್ಟೇ. ಕಳೆದ ಒಂದು ದಶಕದಲ್ಲಿ ಉಡಾನ್‌ ಯೋಜನೆಯ ಮೂಲಕ ವಾಯುಯಾನ ಕ್ಷೇತ್ರದಲ್ಲಿ ತಂದಿರುವ ಮಹತ್ವದ ಬದಲಾವಣೆಗಳನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಸುಮಾರು 30,000 ಕೋಟಿ ವೆಚ್ಚದಲ್ಲಿ 100 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ,ೞೞ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ವರ್ಷದ ಮಾರ್ಚ್‌ನಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆ-ಮಾರ್ಪಡಿಸಿದ ಉಡಾನ್‌ ಯೋಜನೆಗೆ ಅನುಮೋದನೆ ನೀಡಿತ್ತು. 2026-27ರಿಂದ 2035-36ರ ಹಣಕಾಸು ವರ್ಷಗಳವರೆಗೆ 10 ವರ್ಷಗಳ ಅವಧಿಯಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಕೇಂದ್ರದ ಬಜೆಟ್‌ ನೆರವಿನೊಂದಿಗೆ ಒಟ್ಟು 28,840 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ.
ಅಹಮದಾಬಾದ್‌ನಲ್ಲಿ ಆರಂಭಿಸಲಾದ ಹಬ್‌ ಆ್ಯಂಡ್‌ ಸ್ಪೋಕ್‌ ವ್ಯವಸ್ಥೆಯು ದೇಶದ ವಿವಿಧ ಭಾಗಗಳ ಪ್ರಯಾಣಿಕರಿಗೆ ಭಾರತೀಯ ಹಬ್‌ ವಿಮಾನ ನಿಲ್ದಾಣಗಳ ಮೂಲಕ ಅಂತಾರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ವಾರಾಣಸಿ ಮತ್ತು ಅಮೃತಸರದಲ್ಲಿ ಈ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಲಾಗಿದ್ದು, ಅಲ್ಲಿನ ಪ್ರತಿಕ್ರಿಯೆ ಉತ್ತಮವಾಗಿದೆ ಎಂದು ಸಚಿವರು ಹೇಳಿದರು.
ಭಾರತದಲ್ಲಿ ವಿಮಾನ ನಿಲ್ದಾಣಗಳ ಜಾಲ ವೇಗವಾಗಿ ವಿಸ್ತರಿಸುತ್ತಿದ್ದರೂ, ಅವುಗಳನ್ನು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸುವುದೇ ಪ್ರಮುಖ ಸವಾಲಾಗಿದೆ ಎಂದು ನಾಯ್ಡು ಹೇಳಿದರು.

ಇಂದು ಜನರ ಬೇಡಿಕೆ ಕೇವಲ ರೈಲು ನಿಲ್ದಾಣ ಅಥವಾ ರೈಲು ನಿಲುಗಡೆಗೆ ಸೀಮಿತವಾಗಿಲ್ಲ. ತಮ ಊರಿನಲ್ಲೇ ವಿಮಾನ ನಿಲ್ದಾಣ ಯಾವಾಗ ನಿರ್ಮಾಣವಾಗಲಿದೆ ಎಂದು ಜನರು ಕೇಳುತ್ತಿದ್ದಾರೆ. ಈ ಬೇಡಿಕೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. 2 ಮತ್ತು 3ನೇ ಹಂತದ ನಗರಗಳು, ಹಿಮಾಲಯ ಪ್ರದೇಶಗಳು, ದೂರದ ಪ್ರದೇಶಗಳು, ಲಕ್ಷದ್ವೀಪ ಮತ್ತು ಅಂಡಮಾನ್‌ ದ್ವೀಪಗಳ ಜನರೂ ವಿಮಾನ ಸಂಪರ್ಕ ಬಯಸುತ್ತಿದ್ದಾರೆ,ೞೞ ಎಂದು ಅವರು ಹೇಳಿದರು.

ಅಹಮದಾಬಾದ್‌ ಹಾಗೂ ಗುಜರಾತ್‌ನಿಂದ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ ಹೆಚ್ಚಿನದಾಗಿರುವ ಹಿನ್ನೆಲೆಯಲ್ಲಿ ಈ ನಗರವನ್ನು ಹಬ್‌ ಆ್ಯಂಡ್‌ ಸ್ಪೋಕ್‌ ವ್ಯವಸ್ಥೆಯ ಮೂರನೇ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ ಎಂದು ನಾಯ್ಡು ತಿಳಿಸಿದರು. ನಾಗರಿಕ ವಿಮಾನಯಾನ ಕ್ಷೇತ್ರವು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಿಮಾನ ನಿಲ್ದಾಣಗಳು ಮತ್ತು ವಾಯುಯಾನ ಕ್ಷೇತ್ರದ ಅಭಿವೃದ್ಧಿಯು ಇಡೀ ದೇಶದ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಹಾಗೂ ಉಪಮುಖ್ಯಮಂತ್ರಿ ಹರ್ಷ್‌ ಸಂಘವಿ ಉಪಸ್ಥಿತರಿದ್ದರು.

RELATED ARTICLES
spot_img

Latest News