Saturday, April 18, 2026
Homeರಾಜ್ಯಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ : ಇಲ್ಲಿದೆ ಹೈಲೈಟ್ಸ್

ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ : ಇಲ್ಲಿದೆ ಹೈಲೈಟ್ಸ್

President Murmu's speech to the joint session of Parliament

ನವದೆಹಲಿ,ಜ.28- ದಲಿತರು, ಹಿಂದುಳಿದವರು, ಆದಿವಾಸಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಸುಮಾರು 1 ಗಂಟೆ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣದ ಕುರಿತು ಹಾಗೂ ನಕಲಿ ಸುದ್ದಿ ಹಬ್ಬಿಸಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌‍ ಎಂಬುದು ಕೇವಲ ಘೋಷಣೆಯಾಗಿ ಉಳಿದಿಲ್ಲ. 2014ರಲ್ಲಿ ದೇಶದ 25 ಕೋಟಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಒದಗಿಸಲಾಗಿತ್ತು. ಇದರ ಸಂಖ್ಯೆ ಈಗ 95 ಕೋಟಿಗೆ ಏರಿದೆ. ವಿಬಿ-ಜಿ ರಾಮ್‌ ಜಿ ಕಾನೂನಿನ ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ವರ್ಷದಲ್ಲಿ 125 ದಿನಗಳು ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.

ವಿಕಸಿತ ಭಾರತದ ಸಂಕಲ್ಪ, ಕಳೆದ ದಶಕದ ಸಾಧನೆಗಳು ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರದ ಆದ್ಯತೆಗಳ ಕುರಿತು ಸಮಗ್ರ ಚಿತ್ರಣ ನೀಡಿದರು. ಭಾಷಣದ ಆರಂಭದಲ್ಲೇ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ದೂರದೃಷ್ಟಿ ಮತ್ತು ಸಂವಿಧಾನದ ಮಹತ್ವವನ್ನು ಸರಿಸಿದ ಮುರ್ಮು ಅವರು, ಸಂವಿಧಾನವು ಜಾತಿ-ಮತಗಳ ಭೇದಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶವನ್ನು ಒದಗಿಸಿದೆ. ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ, ಸಮಾಜದ ಕೊನೆಯ ವ್ಯಕ್ತಿಗೂ ತಲುಪಬೇಕು ಎಂಬುದೇ ಸರ್ಕಾರದ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಕಳೆದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ದೇಶವು ಸಾಧಿಸಿರುವ ಪ್ರಗತಿಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದ ರಾಷ್ಟ್ರಪತಿಗಳು, ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳ ಪರಿಣಾಮವಾಗಿ ಸುಮಾರು 25 ಕೋಟಿ ಜನರು ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ ಎಂಬ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು. ಇದು ದೇಶದ ಆರ್ಥಿಕ ಸಬಲೀಕರಣದ ವೇಗಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಮೂಲಸೌಕರ್ಯ, ಡಿಜಿಟಲೀಕರಣ, ಬ್ಯಾಂಕಿಂಗ್‌ ಸುಧಾರಣೆಗಳು ಹಾಗೂ ನೇರ ಲಾಭ ವರ್ಗಾವಣೆ ವ್ಯವಸ್ಥೆಗಳ ಮೂಲಕ ಸಾಮಾನ್ಯ ನಾಗರಿಕರ ಬದುಕಿನಲ್ಲಿ ಸಕಾರಾತಕ ಬದಲಾವಣೆಗಳು ಸಂಭವಿಸಿವೆ ಎಂದು ಅಭಿಪ್ರಾಯಪಟ್ಟರು.

ಭಾರತವು ಶೀಘ್ರದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮಲು ಸಜ್ಜಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಷ್ಟ್ರಪತಿ, ಮಹಿಳಾ ಸಬಲೀಕರಣದ ಕುರಿತಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶೇಷವಾಗಿ ಶ್ಲಾಘಿಸಿದರು. ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಬಲವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.

ಇದಕ್ಕೂ ಜೊತೆಗೆ, ಬಡವರ ಸಬಲೀಕರಣ ಮತ್ತು ಸಮಾನತೆಯ ಹಾದಿಯಲ್ಲಿ ಭಾರತ ಇಂದು ಹಿಂದೆಂದಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. ಗ್ರಾಮೀಣಾಭಿವೃದ್ಧಿ, ಆರೋಗ್ಯ ಸೇವೆಗಳು, ಶಿಕ್ಷಣ, ಸ್ವಚ್ಛತೆ, ಗೃಹ ನಿರ್ಮಾಣ ಮತ್ತು ವಿದ್ಯುತ್‌ ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಲಕ್ಷಾಂತರ ಕುಟುಂಬಗಳ ಜೀವನ ಮಟ್ಟವನ್ನು ಹೆಚ್ಚಿಸಿವೆ ಎಂದು ರಾಷ್ಟ್ರಪತಿಗಳು ವಿವರಿಸಿದರು.

ಈ ನಡುವೆ, ಸಂಸತ್ತಿನ ಬಜೆಟ್‌ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ. ಫೆಬ್ರವರಿ 13 ರಂದು ಮೊದಲಾರ್ಧಕ್ಕೆ ವಿರಾಮ ನೀಡಲಾಗುವುದು. ಮಾರ್ಚ್‌ 9 ರಂದು ಅಧಿವೇಶನ ಪುನರಾರಂಭವಾಗಿ ಏಪ್ರಿಲ್‌ 2 ರಂದು ಮುಕ್ತಾಯಗೊಳ್ಳಲಿದೆ. ಒಟ್ಟು 65 ದಿನಗಳಲ್ಲಿ 30 ಅಧಿವೇಶನಗಳನ್ನು ಒಳಗೊಂಡ ಈ ಅಧಿವೇಶನವು ದೇಶದ ಆರ್ಥಿಕ ಹಾಗೂ ನೀತಿ ನಿರ್ಧಾರಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಜನವರಿ 29 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೆಳಿಗ್ಗೆ 11 ಗಂಟೆಗೆ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಫೆಬ್ರವರಿ 1 ರಂದು ಭಾನುವಾರ ಅವರು 2026 ರ ಕೇಂದ್ರ ಬಜೆಟ್‌ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಇದು ಅವರ ದಾಖಲೆಯ ಒಂಬತ್ತನೇ ಬಜೆಟ್‌ ಆಗಿದ್ದು, ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆಯೂ ದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ ಸುಧಾರಣಾ ಕ್ರಮಗಳನ್ನು ಒಳಗೊಂಡಿರಲಿದೆ ಎಂಬ ನಿರೀಕ್ಷೆಯಿದೆ.

ಇತ್ತ, ಕಾಂಗ್ರೆಸ್‌‍ ನೇತೃತ್ವದ ವಿರೋಧ ಪಕ್ಷವು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಮೂಲೆಗುಂಪು ಮಾಡಲು ಸಜ್ಜಾಗಿದೆ. ವಿಬಿ-ಜಿ ರಾಮ್‌ ಜಿ ಕಾಯ್ದೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌), ವಿದೇಶಾಂಗ ನೀತಿ ಹಾಗೂ ಪರಿಸರ ಸಂಬಂಧಿತ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕೆಂಬ ಬೇಡಿಕೆಗಳು ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಬೇಡಿಕೆಗಳನ್ನು ಸರ್ಕಾರ ಈಗಾಗಲೇ ತಿರಸ್ಕರಿಸಿದ್ದು, ಮುಂದಿನ ದಿನಗಳಲ್ಲಿ ಸದನದಲ್ಲಿ ತೀವ್ರ ವಾಗ್ವಾದ ನಡೆಯುವ ಲಕ್ಷಣಗಳು ಕಾಣಿಸುತ್ತಿವೆ.

ರಾಷ್ಟ್ರಪತಿ ಮುರ್ಮು ಅವರ ಭಾಷಣವು ವಿಕಸಿತ ಭಾರತದ ದಿಕ್ಕಿನಲ್ಲಿ ಸರ್ಕಾರದ ದೃಢ ಸಂಕಲ್ಪವನ್ನು ಪುನರುಚ್ಚರಿಸಿದ್ದು, ಬಜೆಟ್‌ ಅಧಿವೇಶನವು ದೇಶದ ಭವಿಷ್ಯದ ಆರ್ಥಿಕ ನೀತಿಗಳಿಗೆ ದಿಕ್ಕು ನೀಡುವ ಪ್ರಮುಖ ವೇದಿಕೆಯಾಗಲಿದೆ ಎಂಬ ಸಂದೇಶವನ್ನು ನೀಡಿದೆ.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಾರತಮ್ಯವಿಲ್ಲದೆ ಸಮಾನ ಹಕ್ಕುಗಳನ್ನು ನೀಡಿದೆ. ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಬಾರದು, ಅದು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದರು.

RELATED ARTICLES

Latest News