ಹೆಣ್ಣಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ಭಾವನೆಗಳನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸುವುದು ಅಷ್ಟು ಸುಲಭವಲ್ಲ. ಆದರೆ ಆ ಕೆಲಸವನ್ನು ಇಲ್ಲಿ ಒಬ್ಬ ಮಹಿಳಾ ನಿರ್ದೇಶಕಿ ಮಾಡಿದ್ದಾರೆ. ಅವರೇ ಎನ್.ಜ್ಯೋತಿಲಕ್ಷ್ಮೀ. ಈ ವಾರ ರಿಲೀಸ್ ಆಗಿರುವಂತ ಬಯಕೆಗಳು ಬೇರೂರಿದಾಗ ಸಿನಿಮಾ ಎಲ್ಲರನ್ನು ಮೌನವಾಗಿಸುವಂತೆ ಮಾಡುತ್ತದೆ. ಈ ಸಿನಿಮಾ ಆರಂಭವಾಗುವ ರೀತಿನೇ ಬೇರೆ ಎಂಡ್ ಆಗುವ ರೀತಿಯೇ ಬೇರೆ. ಊಹೆಗೂ ನಿಲುಕದ ಕಥೆ ಈ ಸಿನಿಮಾದಲ್ಲಿದೆ.
ಇದು ಕಾದಂಬರಿಯಾಧಾರಿತ ಸಿನಿಮಾ. ತೀರಾ ಆಚೆ ಈಚೆ ಹೋಗದೆ ಒಂದು ಕುಟುಂಬದಲ್ಲಿ ಏನೆಲ್ಲಾ ನಡೆಯಬಹುದು ಅಷ್ಟು ಸೀಮಿತ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇಲ್ಲಿ ಬಹಳ ಮುಖ್ಯವಾಗುವುದು ಭಾವನೆಗಳು ಮಾತ್ರ, ಅವಳಲ್ಲಿ ಕಾಣುವ ತೊಳಲಾಟಗಳು ಮಾತ್ರ. ಗಂಡನಿಂದ ಸಿಗದ ಬಯಸಿದ ಬದುಕನ್ನ ಇನ್ನೊಬ್ಬನಿಂದ ಕಂಡುಕೊಳ್ಳುತ್ತಾಳೆ. ಗಂಡನಿಗೆ ಆ ಸತ್ಯ ಗೊತ್ತಾದ ಮೇಲೆ ಒದ್ದಾಡಿ ಹೋಗುತ್ತಾಳೆ. ಸಂಸಾರ ಸಾಗಿಸುವುದಕ್ಕೆ ತೀರಾ ಕಷ್ಟಪಡುತ್ತಾಳೆ. ಇದು ನಾವೂ ನೋಡುವ ರೀತಿಯ ಸಿನಿಮಾ. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಆ ಯುವತಿಯ ಮೇಲೆ ನೋಡುಗರಿಗೆ ಮೂಡಿದ್ದ ಬೇಸರ, ಕೋಪ ಎಲ್ಲವನ್ನು ತಣ್ಣಗೆ ಮಾಡಿಬಿಡುತ್ತೆ. ತಪ್ಪಾಗಿ ತಿಳಿದಿದ್ದ ಭಾವನೆಯೂ ಅಳಿಸಿ ಹೋಗಿ ಬಿಡುತ್ತೆ. ಹಾಗಾದ್ರೆ ಅವಳು ಹಳಿ ತಪ್ಪಿಲ್ವಾ..? ಅವಳ ಜೀವನದಲ್ಲಿ ಬಂದವನು ಯಾರು..? ಇದೆಲ್ಲದ್ದಕ್ಕೂ ಭಾವನೆಗಳು ಬೇರೂರಿದಾಗ ಸಿನಿಮಾ ನೋಡಿ. ನಿಮ್ಮ ಮನಸ್ಸಿನಲ್ಲಿರುವ ದುಃಖವನ್ನು ಹೊರ ಹಾಕುವಂತೆ ಮಾಡಿಬಿಡುತ್ತದೆ.
ಆಕರ್ಷ್ ಆದಿತ್ಯಾ ಹಾಗೂ ಶರಣ್ಯ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶರಣ್ಯ ಅಂತು ತಮ್ಮ ಭಾವನೆಗಳಿಂದಾನೇ ನೋಡುಗರನ್ನ ಕಟ್ಟಿ ಹಾಕಿ ಬಿಡುತ್ತಾರೆ. ಎನ್ ಸುದರ್ಶನ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
