ಬೆಂಗಳೂರು, ಜು. 5- ಕನ್ನಡ ಚಿತ್ರರಂಗದ ಜೊತೆಗೆ ಚಿತ್ರ ನೋಡುವ ವೀಕ್ಷಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಪುತ್ರ ದ್ಯಾನ್ ಯೋಗೇಶ್ವರ್ ನಟಿಸುತ್ತಿರುವ ಚಲನಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳನ್ನು ನಡೆಸುವುದು ಬಹಳ ಕಷ್ಟದ ಕೆಲಸ. ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ತಮನ್ನು ಭೇಟಿ ಮಾಡಿದೆ. ಆ ಸಂದರ್ಭದಲ್ಲಿ ಕೆಲ ಚರ್ಚೆಗಳಾಗಿವೆ ಎಂದರು.
ಚಿತ್ರರಂಗಕ್ಕೆ ಯಾವ ರೀತಿಯ ಸಹಾಯ ಮಾಡಬಹುದು ಎಂದು ಪರಿಶೀಲನೆ ನಡೆಸುತ್ತೇವೆ. ಚಿತ್ರರಂಗದ ಜೊತೆಗೆ ಪ್ರೇಕ್ಷಕರಿಗೂ ಸಹಾಯ ಮಾಡಬೇಕಿದೆ. ವೀಕ್ಷಕರು ಇಲ್ಲದೇ ಇದ್ದರೆ, ಚಿತ್ರರಂಗವೇ ಇರುವುದಿಲ್ಲ ಎಂದರು.

ಜನರಿಗೆ ಹೆಚ್ಚಿನ ಜ್ಞಾನ ನೀಡಬೇಕು, ಇತಿಹಾಸ ಏನು? ಎಂದು ಅರಿವು ಮೂಡಿಸಬೇಕು, ಹೊಸಲೋಕದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕು, ಸಮಾಜದಲ್ಲಿ ಬದಲಾವಣೆ ತರಬೇಕು, ರಾಜಕಾರಣ, ಇತಿಹಾಸ ಮತ್ತು ಸಾಮಾಜಿಕ ಚಿಂತನೆಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ತಾವು ಚಲಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದೆ ಎಂದು ಸರಿಸಿಕೊಂಡ ಅವರು, ಎಲ್ಲಾ ಸಾಮ್ರಾಜ್ಯಕ್ಕೂ ಒಂದು ಇತಿಹಾಸವಿರುತ್ತದೆ, ಎಲ್ಲಾ ಇತಿಹಾಸದಲ್ಲೂ ಒಂದು ಸಾಮ್ರಾಜ್ಯದ ನಾಯಕನ ಕಥೆ ಇರುತ್ತದೆ. ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾಗುವುದಿಲ್ಲ ಎಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇಂದು ದೇವನಹಳ್ಳಿಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ಉದ್ಘಾಟಿಸಲಾಗುತ್ತದೆ ಎಂದರು.

ಮೈಸೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಿಸಲು ಹಿಂದಿನ ಸಿದ್ದರಾಮಯ್ಯ ಸರ್ಕಾರ ನಿರ್ಧಾರ ಮಾಡಿದೆ. ಕರ್ನಾಟಕದಿಂದ ಇತ್ತೀಚೆಗೆ ಐದಾರು ಒಳ್ಳೆಯ ಚಿತ್ರಗಳು ಬಂದು ಸ್ಯಾಂಡಲ್ವುಡ್, ಬಾಲಿವುಡ್ಗಿಂತಲೂ ಮೇಲುಗೈ ಸಾಧಿಸಿದೆ. ಇದಕ್ಕೆ ಕಾರಣಕರ್ತರಾಗಿರುವ ನಿರ್ದೇಶಕರು, ನಿರ್ಮಾಪಕರು, ನಟರನ್ನು ಅಭಿನಂದಿಸುತ್ತೇನೆ ಎಂದರು.
ಶ್ರಮ ಇರುವ ಕಡೆ ಫಲ ಇರುತ್ತದೆ. ಶ್ರಮದಿಂದ ಯಶಸ್ಸು ಸಾಧ್ಯ ಎಂದು ಹೇಳಿದರು.ಕೇಂದ್ರ ಸಚಿವ ವಿ.ಸೋಮಣ್ಣ, ಬಹುಭಾಷ ನಟ ಜಗಪತಿಬಾಬು, ರಾಜ್ಯ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಉದಯ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

