ಬೆಂಗಳೂರು, ಆ.22- ತಂದೆ ಹಾಗೂ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದು, ಮಕ್ಕಳು ಮೃತಪಟ್ಟಿರುವ, ತಂದೆ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯರನ್ನು ಸಾಕ್ಷಿ (15) ಮತ್ತು ರಕ್ಷಿತಾ (10) ಎಂದು ಗುರುತಿಸಲಾಗಿದೆ. ಇವರ ತಂದೆ ಸಾಬಣ್ಣ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಕೃಷಿಕ ಸಾಬಣ್ಣ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಸೇರಿದಂತೆ ಐವರು ಮಕ್ಕಳಿದ್ದಾರೆ. ನಿನ್ನೆ ಅವರ ಪತ್ನಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹೊರಗೆ ತೆರಳಿದ್ದರು. ಗಂಡು ಮಗ ಅಜ್ಜನೊಂದಿಗೆ ಇದ್ದನು. ಹೀಗಾಗಿ ಮನೆಯಲ್ಲಿ ಸಾಕ್ಷಿ, ರಕ್ಷಿತಾ ಹಾಗೂ ಸಾಬಣ್ಣ ಮಾತ್ರ ಇದ್ದರು ಎನ್ನಲಾಗಿದೆ.
ಏನಾಯಿತು ಎಂಬುದು ತಿಳಿದುಬಂದಿಲ್ಲ. ನಿನ್ನೆ ಸಂಜೆ ಮೂವರು ತೆರೆದ ಬಾವಿಗೆ ಬಿದ್ದಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದಾಗ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿವೆ. ಆದರೆ ಸಾಬಣ್ಣ ಪತ್ತೆಯಾಗಿಲ್ಲ. ಅವರ ಬಟ್ಟೆಗಳು ಬಾವಿಯ ದಡದಲ್ಲಿ ಪತ್ತೆಯಾಗಿವೆ.
ಸಾಬಣ್ಣ ತಮ್ಮ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ನಿಡಗುಂದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
