ಬೆಂಗಳೂರು,ಫೆ.11- ನಿಧಾನವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ತಿರುಗೇಟು ನೀಡುವಂತೆ ಮಾತನಾಡಿರುವ ಅವರು, ಅಧಿಕಾರ ಹಂಚಿಕೆ ವಿಚಾರವನ್ನು ಮತ್ತೊಮೆ ಪ್ರಸ್ತಾಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ಭರವಸೆ ಇದೆ. ಮುಂದೆ ಎಲ್ಲವನ್ನೂ ಕಾಲವೇ ಉತ್ತರಿಸುತ್ತದೆ, ಒಳ್ಳೆಯದಾಗಲಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಯತೀಂದ್ರ ಅವರು ಹೇಳಿದ ಮೇಲೆ ಅದೇ ವೇದವಾಕ್ಯ. ಅವರು ಯಾವ ವಿಚಾರ, ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರೇ ಹೈಕಮಾಂಡ್ ಅಲ್ಲವೇ ಎಂದು ವ್ಯಂಗ್ಯವಾಡಿದರು.
ಶಾಸಕ ಇಕ್ಬಾಲ್ ಹುಸೇನ್ ಹೇಳಿರುವುದು ಸರಿ ಇದೆ. ಪಕ್ಷದ ಶಿಸ್ತು ಉಲ್ಲಂಘಿಸಿ ಮಾತನಾಡುವ ಎಲ್ಲರ ಮೇಲೂ ಕ್ರಮ ಆಗಬೇಕಿದೆ ಎಂದರು.
ವಿದೇಶ ಪ್ರವಾಸ :
ಶಾಸಕರು ವಿದೇಶ ಪ್ರವಾಸ ಹೋಗುವುದಕ್ಕೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಯಾವ ಸಂಬಂಧ ಇಲ್ಲ. ಅವರನ್ನು ಯಾರು ಕರೆದುಕೊಂಡು ಹೋಗುತ್ತಿದ್ದಾರೆ? ಡಿ.ಕೆ.ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರವಿದೆ. ಅದು ರಾಜಕೀಯ ಉದ್ದೇಶದಿಂದ ಆ ರೀತಿ ಹೇಳುತ್ತಿರಬಹುದು ಎಂದು ಹೇಳಿದರು.
ದೆಹಲಿಗೆ ಭೇಟಿ ನೀಡುತ್ತಿರುವುದು ಯಾವುದೇ ರೀತಿಯ ರಾಜಕಾರಣಕ್ಕೆ ಅಲ್ಲ. ಹಾಲು ಉತ್ಪಾದಕರ ಮಹಾಮಂಡಳಿಗಳ ವಸ್ತುಪ್ರದರ್ಶನವಿದೆ. ಹಾಗಾಗಿ ಕೆಎಂಎಫ್ನ ಆಡಳಿತ ಮಂಡಳಿ ಸಹಿತ ಹೋಗುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗುವುದು ಹೊಸದಲ್ಲ. ಅವರು 40 ವರ್ಷದಿಂದಲೂ ಹೋಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಅವರಿಗೆ ರಾಜಕೀಯವಲ್ಲದೆ ಬೇರೆ ಚರ್ಚೆಯೂ ಇರುತ್ತದೆ. ಉಪಮುಖ್ಯಮಂತ್ರಿ ಆಗಿರುವುದರಿಂದ ವಿವಿಧ ಇಲಾಖೆಗಳಿಗೆ ಭೇಟಿ ನೀಡುವ ಅಗತ್ಯ ಇರಬಹುದು ಎಂದು ತಿಳಿಸಿದರು.
ಕಾಂಗ್ರೆಸ್ ಎಲ್ಲರನ್ನೂ ಗೌರವಿಸುತ್ತದೆ. ಸರ್ಕಾರ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು. ನಮದು ಸರ್ವಧರ್ಮ ಪಾಲಿಸಿ ಅಲ್ಲವೇ? ಅತಿಥಿಗಳಿಗೆ ಆ ರೀತಿ ಮಾಡಿಬಹುದೆಂದು ಬಿಜೆಪಿ ಮುಖಂಡನಿಗೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
