ನವದೆಹಲಿ,ಮಾ.1- ಟೆಹ್ರಾನ್-ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ಕಾರ್ಯಚರಣೆಯಿಂದಾಗಿ ಈಗಾಗಲೇ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಸಾಕಷ್ಟು ನಕರಾತಕ ಪರಿಣಾಮ ಬೀರಲಿದ್ದು, ಹೊರ್ಮುಜ್ ಜಲಸಂಧಿಯಿಂದ ಸರಬರಾಜಾಗುತ್ತಿದ್ದ ತೈಲಕ್ಕೆ ಸದ್ಯಕ್ಕೆ ಬ್ರೇಕ್ ಬೀಳಲಿದ್ದು, ತೈಲ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿದೆ.
ಅಮೆರಿಕ-ಇರಾನ್ ಸಂಘರ್ಷದಿಂದ ತೈಲ ಸರಬರಾಜಿನಲ್ಲಿ ಏರುಪೇರಾಗುವ ಆತಂಕ ಎದುರಾಗಿದೆ. ಹೊರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಸಾಗಣೆಗೆ ಅಡ್ಡಿಯಾಗಿದೆ. ಈ ನಡುವೆ, ಸಂಘರ್ಷದಿಂದ ಭಾರತಕ್ಕೆ ಹೆಚ್ಚಿನ ತೈಲ ಅಭಾವದ ಅಪಾಯವಿಲ್ಲ. ಮುಂದಿನ 74 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದೆ ಎಂದು ಸರಕಾರ ಹೇಳಿಕೊಂಡಿದೆ.
ಕಾರ್ಯತಂತ್ರ ಭಾಗವಾಗಿ ಸಾಕಷ್ಟು ತೈಲ ಸಂಗ್ರಹ ಮಾಡಿಕೊಳ್ಳಲಾಗಿದೆ. ದೇಶಕ್ಕೆ ಅಗತ್ಯ ಇರುವ ತೈಲ ಪೂರೈಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 74 ದಿನಗಳ ಕಾಲ ದೇಶಿಯವಾಗಿ ಯಾವುದೇ ತೈಲದ ಸಮಸ್ಯೆ ಇಲ್ಲ. ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಸವಾಲು, ಪರಿಣಾಮ ಎದುರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಯುದ್ಧದ ಪರಿಸ್ಥಿತಿ ಅವಲೋಕಿಸಿ ತೈಲ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು,ೞ ಎಂದು ಸರಕಾರದ ಮೂಲಗಳು ತಿಳಿಸಿವೆ.
ಆರ್ಥಿಕ ಸಂಕಟ:
ಅಮೆರಿಕ-ಇರಾನ್ ಸಂಘರ್ಷದಿಂದ ತೈಲ ಮಾರುಕಟ್ಟೆ ಅನಿಶ್ಚಿತತೆಗೆ ಒಳಗಾಗಿದೆ. ತೈಲ ಉತ್ಪಾದನೆ, ಸರಬರಾಜು ಏರುಪೇರಾಗಲಿದ್ದು, ಬೆಲೆ ಏರಿಕೆಗೂ ದಾರಿಯಾಗುವ ಅಪಾಯವಿದೆ. ಪರಿಣಾಮ ಭಾರತದಲ್ಲೂ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.
ಸಂಘರ್ಷದಿಂದ ಭಾರತದ ಬಾಸತಿ ಅಕ್ಕಿ ರಫ್ತಿಗೂ ಬಿಸಿ ತಟ್ಟಲಿದೆ. ಯುದ್ಧದ ಪರಿಣಾಮ ಅಕ್ಕಿ ರಫ್ತಿಗೆ ಅಡ್ಡಿಯಾಗಿದೆ. ಸರಕು ಸಾಗಣೆ ಹಡಗು, ವಿಮಾನಗಳ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಇರಾನ್ ವರ್ತಕರು ಖರೀದಿಸಿದ್ದ ಬಾಸತಿ ಅಕ್ಕಿ ರಫ್ತು ಸ್ಥಗಿತಗೊಂಡಿದೆ. ಪರಿಣಾಮ ಬೆಲೆ ಕುಸಿತದ ಭೀತಿ ಕಾಡುತ್ತಿದೆ ಎಂದು ಅಕ್ಕಿ ರಫ್ತು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಷೇರುಮಾರುಕಟ್ಟೆ ಮೇಲೆ ಪರಿಣಾಮ
ದೇಶದ ಷೇರುಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗುವ ಸಂಭವವಿದೆ. ಬಂಗಾರ ಬೆಳ್ಳಿ ಬೆಲೆ ಏರಿಕೆ ನಾಗಲೋಟ ಮುಂದುವರಿಯುವ ಸೂಚನೆಗಳಿವೆ. ಪರಿಸ್ಥಿತಿ ಒಂದು ಅಂದಾಜಿನ ಪ್ರಕಾರ ಬೆಳ್ಳಿ ಬೆಲೆ ಕೆ.ಜಿ.ಗೆ 3 ಲಕ್ಷ ರೂ. ಗಡಿ ದಾಟುವ ನಿರೀಕ್ಷೆಗಳಿವೆ. ಚಿನ್ನದ ಬೆಲೆ 10 ಗ್ರಾಂಗೆ 1.68 ಲಕ್ಷ ರೂ.ಗಳಿಂದ 1.70 ಲಕ್ಷ ರೂ. ದಾಟುವ ಸಂಭವವಿದೆ.
