ಬೆಂಗಳೂರು,ಮಾ.6- ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು 25 ಕೋಟಿ ರೂ.ಗಳ ವೆಚ್ಚದಲ್ಲಿ ಸಂಯೋಜಿತ ಡಿಜಿಟಲ್ ವೇದಿಕೆಯನ್ನು ರೂಪಿಸಲಾಗುವುದು ಎಂದರು.
ಬೆಂಗಳೂರು ನಗರ ಒಳಗೊಂಡಂತೆ ನಗರಪ್ರದೇಶಗಳಲ್ಲಿನ ಪೊಲೀಸಿಂಗ್ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಪೊಲೀಸಿಂಗ್ ನಾವೀನ್ಯತೆ ಸಂಸ್ಥೆಯನ್ನು ಸೃಜಿಸಿ ಜಿಬಿಎ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದೊಂದಿಗೆ ಸಿಎಸ್ಆರ್ ವಿಧಿಯನ್ನು ಬಳಸಿಕೊಂಡು ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಗರಿಷ್ಠ ಭದ್ರತಾ ಕೇಂದ್ರ ಕಾರಾಗೃಹ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ 1 ಸಾವಿರ ಬಂಧಿಗಳ ಸಾಮರ್ಥ್ಯದ ಜಿಲ್ಲಾ ಕೇಂದ್ರ ಕಾರಾಗೃಹಗಳನ್ನು 471 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಂಗಳೂರು ಕೇಂದ್ರ ಕಾರಾಗೃಹದ 2ನೇ ಹಂತದ ಕಾಮಗಾರಿ ಮತ್ತು ರಾಯಚೂರು ಜಿಲ್ಲಾ ಕೇಂದ್ರ ಕಾರಾಗೃಹಗಳ ನಿರ್ಮಾಣ ಕಾರ್ಯಗಳನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಆಪರೇಷನ್ ಪರಿಶುದ್ಧೀಕರಣದಡಿಯಲ್ಲಿ ಎಲ್ಲಾ ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ ಹಾಗೂ ಇನ್ನಿತರ ನಿಷೇಧಿತ ವಸ್ತುಗಳ ಬಳಕೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಆರ್ಟಿಫಿಷಿಯಲ್ ಇನ್ಟ್ರುಶನ್ ಡೆಟೆಕ್ಷನ್ ಸಿಸ್ಟಮ್, ಸಿಸಿ ಟಿವಿ, ಬಾಡಿ ವಾರ್ನ್ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಭದ್ರತಾ ತಪಾಸಣಾ ಉಪಕರಣಗಳನ್ನು 20 ಕೋಟಿ ರೂ.ವೆಚ್ಚದಲ್ಲಿ ಒದಗಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
