ನಾಸಿಕ್, ಮಾ. 24: ರಾಜಕೀಯ ದಿಗ್ಗಜರಿಗೆ ಜ್ಯೋತಿಷ್ಯ ಹೇಳುತ್ತಿದ್ದ ಖ್ಯಾತ ಜ್ಯೋತಿಷಿಯೊಬ್ಬರನ್ನು ಅತ್ಯಾಚಾರದ ಆರೋಪದ ಮೇಲೆ ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಬಂಧಿತ ಜ್ಯೋತಿಷಿಯನ್ನು ಅಶೋಕ್ ಖರತ್ ಎಂದು ಗುರುತಿಸಲಾಗಿದೆ. ಅವರ ಬಳಿ ದೊರೆತ ಪೆನ್ಡ್ರೈವ್ನಬಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ಹೇಳಿಕೊಂಡು ಜ್ಯೋತಿಷಿಯಾಗಿದ್ದ ಖರತ್ ಮಹಿಳೆಯರನ್ನು ತನ್ನ ಕಚೇರಿಗೆ ಕರೆಸಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ನಂಬಿಸಿ ಮಾದಕ ದ್ರವ್ಯ ನೀಡುವ ಮೂಲಕ ಅತ್ಯಾಚಾರವೆಸಗುತ್ತಿದ್ದ ಎಂದು ಆರೋಪಿಸಲಾಗಿದೆ.
ತಮ ಬಳಿಗೆ ಬರುವ ಮಹಿಳೆಯರಿಗೆ ಸಹಕರಿಸದಿದ್ದರೆ ನಿಮ ಗಂಡಂದಿರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಮೂಲಕ ಅಥವಾ ಮಾಟಮಂತ್ರದ ಭಯವನ್ನು ಅವರಲ್ಲಿ ತುಂಬಿ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ.
ಖರತ್ ತನ್ನ ಕಚೇರಿಯಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ.
ನವೆಂಬರ್ 2022 ರಿಂದ ಡಿಸೆಂಬರ್ 2025 ರ ನಡುವೆ ಜ್ಯೋತಿಷಿ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಎಫ್ಐಆರ್ನಲ್ಲಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಜ್ಯೋತಿಷಿ ನಾಸಿಕ್ನ ಕೆನಡಾ ಕಾರ್ನರ್ ಪ್ರದೇಶದಲ್ಲಿರುವ ತನ್ನ ಕಚೇರಿಗೆ ಕರೆಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.ಖರತ್ ಅವರು ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲ್ಲೂಕಿನ ಮಿರ್ಗಾಂವ್ನಲ್ಲಿರುವ ಶ್ರೀ ಈಶೇಶ್ವರ ಮಹಾದೇವ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ.
ಈ ಹಿಂದೆ ಅನೇಕ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಈ ಜ್ಯೋತಿಷಿಯನ್ನು ಭೇಟಿ ಮಾಡಿದ್ದರು ಎಂದು ವರದಿಯಾಗಿದೆ. ಕಳೆದ ನವೆಂಬರ್ 2022 ರಲ್ಲಿ, ಆಗಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರ ಸಂಪುಟ ಸಹೋದ್ಯೋಗಿಗಳಾದ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ದೀಪಕ್ ಕೇಸರ್ಕರ್ ಅವರೊಂದಿಗೆ ಮಿರ್ಗಾಂವ್ ದೇವಸ್ಥಾನದಲ್ಲಿ ಖರತ್ ಅವರನ್ನು ಭೇಟಿಯಾಗಿದ್ದರು.
