ನವದೆಹಲಿ,ಏ.8- ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಕದನ ವಿರಾಮ ಘೋಷಿಸಲ್ಪಟ್ಟಿದ್ದರೂ , ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರಕಚೇರಿ ಭಾರತೀಯ ಪ್ರಜೆಗಳು ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಸಲಹೆ ಮಾಡಿದೆ.
ಇಂದು ಹೊರಡಿಸಲಾದ ಸೂಚನೆಯಲ್ಲಿ ಇರಾನ್ನಲ್ಲಿರುವ ಭಾರತೀಯ ಪ್ರಜೆಗಳು ರಾಯಭಾರ ಕಚೇರಿಯೊಂದಿಗೆ ಸಮನ್ವಯದಿಂದ ಇರಬೇಕು ಮತ್ತು ನಿರ್ಗಮನಕ್ಕಾಗಿ ಅದು ಸೂಚಿಸಿದ ಮಾರ್ಗಗಳನ್ನು ಬಳಸಬೇಕೆಂದು ಕೋರಲಾಗಿದೆ.ರಾಯಭಾರ ಕಚೇರಿಯೊಂದಿಗೆ ಪೂರ್ವ ಸಮಾಲೋಚನೆ ಮತ್ತು ಸಮನ್ವಯವಿಲ್ಲದೆ ಯಾವುದೇ ಅಂತಾರಾಷ್ಟ್ರೀಯ ಭೂ ಗಡಿಯನ್ನು ಸಮೀಪಿಸಲು ಪ್ರಯತ್ನಿಸಬಾರದು ಎಂದು ಸಹ ಉಲ್ಲೇಖಿಸಲಾಗಿದೆ.
ಏ.7ರಂದು ಹೊರಡಿಸಿದ ಹಿಂದಿನ ಸಲಹೆಯಲ್ಲಿ, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳು ಕನಿಷ್ಠ 48 ಗಂಟೆಗಳ ಕಾಲ ಒಳಾಂಗಣದಲ್ಲೇ ಇರಬೇಕೆಂದು ಮತ್ತು ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯ ಮಧ್ಯೆ ಸೂಕ್ಷ್ಮಸ್ಥಳಗಳನ್ನು ತಪ್ಪಿಸಬೇಕೆಂದು ಒತ್ತಾಯಿಸಿತ್ತು.
ಈಗೂ ಕೂಡ ಇರಾನ್ನಲ್ಲಿರುವ ಭಾರತೀಯ ಪ್ರಜೆಗಳು ಮುಂದಿನ 48 ಗಂಟೆಗಳ ಕಾಲ ತಾವಿರುವ ಸ್ಥಳದಲ್ಲೇ ಇರಬೇಕು, ಎಲ್ಲಾ ವಿದ್ಯುತ್, ಮಿಲಿಟರಿ ಸ್ಥಾಪನೆಗಳು ಮತ್ತು ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳನ್ನು ತಪ್ಪಿಸಬೇಕು, ಒಳಾಂಗಣದಲ್ಲಿಯೇ ಇರಬೇಕು ಮತ್ತು ಯಾವುದೇ ಹೆದ್ದಾರಿ ಸಂಚಾರವನ್ನು ರಾಯಭಾರ ಕಚೇರಿಯೊಂದಿಗೆ ಕಟ್ಟುನಿಟ್ಟಾಗಿ ಸಂಯೋಜಿಸಬೇಕು ಎಂದು ತಿಳಿಸಿದೆ.
ಇರಾನ್ ಮೇಲೆ ದಾಳಿ ಮಾಡಲು ಟ್ರಂಪ್ ನೀಡಿದ್ದ ಗಡುವು ಮುಗಿಯಲು 1 ಗಂಟೆಗಿಂತ ಕಡಿಮೆ ಸಮಯ ಇರುವಾಗ, ಮಂಗಳವಾರ ಅಮೆರಿಕ ಮತ್ತು ಇರಾನ್ ಎರಡು ವಾರಗಳ ಕದನ ವಿರಾಮಕ್ಕೆ ಸಹಿ ಹಾಕಿದ್ದವು. ಒಪ್ಪಂದದ ಭಾಗವಾಗಿ ಟೆಹ್ರಾನ್ ನಿರ್ಣಾಯಕ ಹಾರ್ಮುಜ್ ಜಲಸಂಧಿಯನ್ನು ಸೀಮಿತ ಅವಧಿಗೆ ಮತ್ತೆ ತೆರೆಯಲು ಒಪ್ಪಿಕೊಂಡಿತು.
ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಶ್ವೇತಭವನ ತಿಳಿಸಿದೆ. ಯುದ್ಧ ವಿರಾಮಕ್ಕೆ ಕರೆ ನೀಡಿದ್ದ ಪಾಕಿಸ್ತಾನದ ನಾಯಕತ್ವದೊಂದಿಗೆ ಮಾತನಾಡಿದ್ದೇನೆ ಎಂದು ಟ್ರಂಪ್ ಹೇಳಿದ ನಂತರ ಕೊನೆಯ ಕ್ಷಣದ ಒಪ್ಪಂದಕ್ಕೆ ಬರಲಾಯಿತು.ಕದನ ವಿರಾಮ ಯಶಸ್ವಿಯಾಗಿದೆ ಎಂದು ಇರಾನ್ ಬಣ್ಣಿಸಿದ್ದು, ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನಗಳ ಭಾಗವಾಗಿ ಶುಕ್ರವಾರದಿಂದ ಪಾಕಿಸ್ತಾನದಲ್ಲಿ ವಾಷಿಂಗ್ಟನ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದೆ.
ಇರಾನ್ ಅಮೆರಿಕ ಜೊತೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ, ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಎಲ್ಲಾ ಮಿಲಿಟರಿ ಘಟಕಗಳಿಗೆ ಗುಂಡಿನ ದಾಳಿ ನಿಲ್ಲಿಸುವಂತೆ ಆದೇಶಿಸಿದ್ದಾರೆ, ಆದರೆ ಸಂಘರ್ಷ ಮುಂದುವರಿಯಬಹುದು ಎಂದು ಸೂಚಿಸಿದ್ದಾರೆ.
ಸರ್ಕಾರಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ (ಐಆರ್ಐಬಿ) ನಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ಖಮೇನಿ ಅವರು, ಇದು ಯುದ್ಧದ ಅಂತ್ಯವಲ್ಲ, ಆದರೆ ಎಲ್ಲಾ ಮಿಲಿಟರಿ ಶಾಖೆಗಳು ಸುಪ್ರೀಂ ನಾಯಕನ ಆದೇಶವನ್ನು ಪಾಲಿಸಬೇಕು ಮತ್ತು ತಮ ಗುಂಡಿನ ದಾಳಿಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಇಸ್ರೇಲ್ ಇರಾನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ ಎಂದು ಬುಧವಾರ ಮುಂಜಾನೆ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
