ಬೆಂಗಳೂರು,ಏ.10- ಕಳೆದ ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಖ್ಯಾತ ಪತ್ರಕರ್ತ ಹಾಗೂ ಸಮಾಜ ಸೇವಕ ನಾಡೋಜ ಡಾ. ಎಸ್.ಆರ್.ರಾಮಸ್ವಾಮಿ (89) ಅವರು ಇಂದು ಬೆಳಗ್ಗೆ ನಗರದಲ್ಲಿ ನಿಧನರಾಗಿದ್ದಾರೆ.
ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳು ಜರುಗಲಿವೆ.
ರಾಷ್ಟ್ರೋತ್ಥಾನ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಸ್.ಆರ್.ರಾಮಸ್ವಾಮಿ ಅವರ ಪೂರ್ಣ ಹೆಸರು ಸೊಂಡೆಕೊಪ್ಪ ರಾಮಚಂದ್ರಶಾಸ್ತ್ರಿ ರಾಮಸ್ವಾಮಿ. 29ನೇ ಅಕ್ಟೋಬರ್ 1937 ರಲ್ಲಿ ಜನಿಸಿದ ಅವರು ಕನ್ನಡದ ಸಾಹಿತಿ, ಪತ್ರಕರ್ತ, ಕಲಾ ವಿಮರ್ಶಕ, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ನಾಡಿಗೆ ಅವಿರತ ಸೇವೆ ಸಲ್ಲಿಸಿದರು. ಮೊನಚು ಶೈಲಿ, ಹದವರಿತ ಬರಹ, ಯುವಜನರಿಗೆ ಬೆನ್ನುತಟ್ಟುವ ಸ್ವಭಾವ, ಸಂಘಟನೆಯಲ್ಲಿದ್ದ ಶ್ರದ್ಧೆ ಅವರ ವ್ಯಕ್ತಿತ್ವದ ಗಮನ ಸೆಳೆಯುವ ಅಂಶಗಳಾಗಿದ್ದವು.
ಎಸ್.ಆರ್. ರಾಮಸ್ವಾಮಿ ಅವರು ಕೇವಲ ಸಾಹಿತಿಯಷ್ಟೇ ಅಲ್ಲದೆ, ಕಲಾ ವಿಮರ್ಶಕರು, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 50ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ 2000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು, ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ (1972-79) ಮತ್ತು ದೀರ್ಘಕಾಲದವರೆಗೆ ಉತ್ಥಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಗೋಖಲೆ ಸಾರ್ವಜನಿಕ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ದಶಕಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದರು.
ಸ್ವದೇಶಿ ಚಳವಳಿಯ ಪ್ರಬಲ ಪ್ರತಿಪಾದಕರಾಗಿದ್ದ ಇವರು, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಮಾರ್ಗದರ್ಶನ ನೀಡಿದ್ದರು. ವಿಶೇಷವಾಗಿ ಸಮುದಾಯ ಭೂಮಿಯ ಮೇಲಿನ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಜಯ ತಂದ ಘಟನೆಗಳು ಇಂದಿಗೂ ಸರಣೀಯ.
ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ ಅವರಂತಹ ದಿಗ್ಗಜರ ಒಡನಾಡಿಯಾಗಿದ್ದ ಇವರು ಸಾಂಸ್ಕೃತಿಕ ಲೋಕದ ಕೊಂಡಿಯಾಗಿದ್ದರು. ಸಾಹಿತ್ಯದ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಪರಿಸರ ಸಹ ರಾಮಸ್ವಾಮಿ ಅವರ ಆಸಕ್ತಿಯ ವಿಚಾರಗಳಾಗಿದ್ದವು. ಹಲವು ಸ್ವಯಂಪ್ರೇರಿತ ಗ್ರಾಮೀಣಾಭಿವೃದ್ಧಿ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಿದರು. ಅರಣ್ಯ ನೀತಿಗಳಿಂದ ಬೆದರಿಕೆಗೆ ಒಳಗಾದ ಸಮುದಾಯಗಳಿಗೆ ಭೂಮಿಯ ಮೇಲಿನ ಹಕ್ಕು ಸಿಗಬೇಕು ಎಂದು ಪ್ರತಿಪಾದಿಸಿದ್ದರು.
ಇವರ ಸಾಹಿತ್ಯಕ ಮತ್ತು ಪತ್ರಿಕೋದ್ಯಮದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಹಾಗೂ ಕೆ.ಎಸ್.ಒ.ಯು. ವತಿಯಿಂದ ಗೌರವ ಡಾಕ್ಟರೇಟ್ ಲಭಿಸಿವೆ. ಇವರ ನಿಧನಕ್ಕೆ ಸಾಂಸ್ಕೃತಿಕ ಮತ್ತು ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
