ಇಸ್ಲಾಮಾಬಾದ್, ಏ.10- ಅಮೆರಿಕ-ಇರಾನ್ ಮಧ್ಯೆ ಶಾಂತಿ ಸಂಧಾನಕ್ಕೆ ಇಸ್ಲಾ ಮಾಬಾದಿನಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿರುವ ಸಮಯದಲ್ಲೇ ಪಾಕಿಸ್ತಾನ ಮತ್ತು ಇಸ್ರೇಲ್ ಮಧ್ಯೆ ಕಿತ್ತಾಟ ತೀವ್ರಗೊಂಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಲೆಬನಾನ್ನಲ್ಲಿ ಜನಾಂಗೀಯ ಹತ್ಯೆ ನಡೆಸುತ್ತಿರುವ ಇಸ್ರೇಲ್ ಅನ್ನು ಕ್ಯಾನ್ಸರ್ ಕಾರಕ ದೇಶ, ಮಾನವೀಯತೆಗೆ ಶಾಪ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಮಾತ್ರವಲ್ಲ, ಯೂರೋಪಿನ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ತಾನ್ ಭೂಮಿಯಲ್ಲಿ ಈ ಕ್ಯಾನ್ಸರ್ ಅನ್ನು ಸೃಷ್ಟಿಸಿದವರು ನರಕದಲ್ಲಿ ಬೆಂದು ಹೋಗಲಿ ಎಂದು ಶಾಪ ಹಾಕಿದ್ದಾರೆ.ಗಾಜಾದ ನಂತರ ಈಗ ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದು, ರಕ್ತಪಾತವು ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕ್ ಸಚಿವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್ ಇದನ್ನು ಅಸಭ್ಯ, ಅಪಮಾನಕಾರಿ ಮತ್ತು ಯಹೂದಿ ವಿರೋಧಿ ಹೇಳಿಕೆ ಎಂದು ಕರೆದಿದೆ. ಶಾಂತಿ ಮಾತುಕತೆ ನಡೆಸುವ ದೇಶದ ಜವಾಬ್ದಾರಿಯುತ ಸಚಿವರು ಇಂತಹ ಭಾಷೆ ಬಳಸುವುದು ಸರಿಯಲ್ಲ ಎಂದು ಬೆಂಜಮಿನ್ ನೆತನ್ಯಾಹು ಟೀಕಿಸಿದ್ದಾರೆ.
ಖವಾಜಾ ಆಸಿಫ್ ಇಸ್ರೇಲ್ ವಿರುದ್ಧ ಸಿಟ್ಟು ಹೊರಹಾಕುವುದು ಇದೇ ಮೊದಲೆನಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮಾನವಕುಲದ ಅತ್ಯಂತ ದೊಡ್ಡ ಅಪರಾಧಿ. ಅಮೆರಿಕ ವೆನೆಜುವೆಲಾದ ಅಧ್ಯಕ್ಷರನ್ನು ಸೆರೆಹಿಡಿದಂತೆಯೇ ನೆತನ್ಯಾಹು ಅವರನ್ನು ಅಪಹರಿಸಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಅವರು ಈ ಹಿಂದೆ ಆಗ್ರಹಿಸಿದ್ದರು.
