ಚೆನ್ನೈ, ಮೇ.9- ಬೆಂಬಲ ಬೇಕೇ ಹಾಗಾದರೆ ನಮ ಪಕ್ಷಕ್ಕೆ ಡಿಸಿಎಂ ಪಟ್ಟು ಬಿಟ್ಟುಕೊಡಿ ಎಂದು ವಿಸಿಕೆ ಪಕ್ಷ ಪಟ್ಟು ಹಿಡಿದಿರುವುದರಿಂದ ತಮಿಳುನಾಡಿನಲ್ಲಿ ದಳಪತಿ ವಿಜಯ್ ಪಟ್ಟಾಭಿಷೇಕಕ್ಕೆ ಮತ್ತೆ ಹಿನ್ನಡೆಯಾಗಿದೆ.
ವಿಜಯ್ ಮತ್ತು ರಾಜ್ಯಪಾಲರ ನಡುವಿನ ಜಿದ್ದಾಜಿದ್ದಿನಿಂದಾಗಿ ತಮಿಳುನಾಡು ರಾಜಕೀಯ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ. ಇಂದು ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಬಹುಮತದ ಮ್ಯಾಜಿಕ್ ನಂಬರ್ ಸಾಬೀತುಪಡಿಸಲೇ ಬೇಕು ಎಂದು ಆರ್ಲೇಕರ್ ಹೇಳಿ ಕಳುಹಿಸಿದ್ದಾರೆ.
ಟಿವಿಕೆ ಅಧ್ಯಕ್ಷ ವಿಜಯ್ ಅವರು ಇಂದು ರಾಜಭವನದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾಗಿ, ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ಪತ್ರ ಸಲ್ಲಿಸಿದ್ದಾರೆ. ಆದರೆ ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಅಗತ್ಯವಿದೆ. ಅದನ್ನು ತನ್ನಿ ಎನ್ನುವುದು ರಾಜ್ಯಪಾಲರ ವಾದವಾಗಿದೆ.
ಕಾಂಗ್ರೆಸ್ನ ಐದು, ಎಡಪಕ್ಷಗಳ ನಾಲ್ಕು ಸದಸ್ಯರ ಬೆಂಬಲ ಪಡೆದಿರುವ ಟಿವಿಕೆಗೆ ಇಬ್ಬರು ಶಾಸಕರನ್ನು ಹೊಂದಿರುವ ವಿಸಿಕೆ ಪಕ್ಷ ಕೊನೆಗೂ ಬೆಂಬಲ ನೀಡಿದೆ. ಆದರೆ ನಮ ಈ ತ್ಯಾಗಕ್ಕಾಗಿ ನಮ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವಂತೆ ಆ ಪಕ್ಷ ಪಟ್ಟು ಹಿಡಿದಿದೆ.
ಅವರ ಬೇಡಿಕೆಗೆ ವಿಜಯ್ ಕಡೆಯಿಂದ ಯಾವುದೇ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಇಲ್ಲಿಯವರೆಗೆ ವಿಸಿಕೆ ತನ್ನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಉಲ್ಟಾ ಹೊಡೆದ ಐಯುಎಂಎಲ್; ಈ ಹಿಂದೆ ಟಿವಿಕೆ ಬೆಂಬಲ ನೀಡಬಹುದು ಎನ್ನಲಾಗಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈಗ ಉಲ್ಟಾ ಹೊಡೆದಿದೆ.ನಮ್ಮದು ಸಿದ್ಧಾಂತದ ಮೈತ್ರಿ, ಡಿಎಂಕೆಯನ್ನು ಬಿಟ್ಟು ಬೇರೆ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಆ ಪಕ್ಷ ಘೋಷಿಸಿರುವುದು ವಿಜಯ್ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.
ಒಂದು ವೇಳೆ ವಿಸಿಕೆ ಬೆಂಬಲ ನೀಡದಿದ್ದರೆ, ವಿಜಯ್ ಅವರು ಬೇರೆ ಪಕ್ಷಗಳ ಶಾಸಕರ ಮೊರೆ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಥವಾ ಮೈತ್ರಿಗೆ ಮುನ್ನುಡಿ ಹಾಡಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
