ಬೆಂಗಳೂರು,ಫೆ.2-ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಚಾಕುವಿನಿಂದ ಇರಿದು ಒಬ್ಬನನ್ನು ಕೊಲೆ ಮಾಡಿ ಮತ್ತೊಬ್ಬನ ಕೊಲೆಗೆ ಯತ್ನಿಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಬಿಬಿಎಂಪಿ ಕಸ ವಿಲೇವಾರಿಯ ಗುತ್ತಿಗೆ ಕಾರ್ಮಿಕ ಗುಣ (26) ಕೊಲೆಯಾದವರು. ಸ್ನೇಹಿತ ವೇಲು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಾಯಂಡನಹಳ್ಳಿಯ ಅಂಬೇಡ್ಕರ್ ನಗರದ ನಿವಾಸಿ ಗುಣ ಹಾಗೂ ವಿನೋದ್ ಸ್ನೇಹಿತರಾಗಿದ್ದು, ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಗುಣ ಹಾಗೂ ವಿನೋದ್ ನಡುವೆ ಗಲಾಟೆಯಾಗಿದೆ. ಸ್ಥಳೀಯರು ಜಗಳ ಬಿಡಿಸಿ ಇಬ್ಬರನ್ನು ಕಳುಹಿಸಿದ್ದಾರೆ.ಆದರೆ ವಿನೋದ್ ದ್ವೇಷ ಸಾಧಿಸುತ್ತಿದ್ದನು. ನಿನ್ನೆ ರಾತ್ರಿ 8.30 ರ ಸುಮಾರಿನಲ್ಲಿ ಗುಣ ಬೈಕ್ನಲ್ಲಿ ವೇಲು ಜೊತೆ ಮನೆ ಬಳಿ ಬರುತ್ತಿದ್ದಾಗ ವಿನೋದ್ ಹಾಗೂ ಇತರ ಮೂವರು ಬೈಕ್ ಅಡ್ಡಗಟ್ಟಿ ಗುಣನ ಜೊತೆ ಜಗಳವಾಡಿದ್ದಾರೆ.
ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋದಾಗ ವಿನೋದ್ ಚಾಕುವಿನಿಂದ ಗುಣ ಹಾಗೂ ವೇಲುಗೆ ಇರಿದು ಸಹಚರರ ಜೊತೆ ಪರಾರಿಯಾಗಿದ್ದಾನೆ. ಚಾಕು ಇರಿತದಿಂದ ಗಂಭೀರ ಗಾಯಗೊಂಡ ಗುಣನಿಗೆ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈತನ ಜೊತೆಯಲ್ಲಿದ್ದ ವೇಲು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಕಾರ್ಯಾಚರಣೆ ನಡೆಸಿ ವಿನೋದ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
