ಬೆಂಗಳೂರು,ಮಾ.22- ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ಈಗ ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ನಗರದಲ್ಲಿ ಕುಡಿಯುವ ನೀರಿನ ದುರುಪಯೋಗ ತಡೆಗಟ್ಟಲು ಜಲಮಂಡಳಿ ಹದ್ದಿನ ಕಣ್ಣಿಟ್ಟಿದೆ.
ಕುಡಿಯುವ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಕಾರು/ಬೈಕ್ ತೊಳೆಯಲು ಬಳಸಬಾರದು. ಗಿಡಗಳಿಗೆ ನೀರು ಹಾಕಲು, ಮನೆ ಮುಂದೆ ಸ್ವಚ್ಛತೆಗೆ, ಕಟ್ಟಡ ನಿರ್ಮಾಣಕ್ಕೂ ಕುಡಿಯುವ ನೀರಿನ ಬಳಕೆ ನಿಷೇಧಿಸಲಾಗಿದೆ. ಒಂದು ವೇಳೆ ಕಾವೇರಿ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ದಂಡ ವಿಧಿಸಲು ಮುಂದಾಗಿದೆ.
ಎಷ್ಟು ದಂಡ :
ಮೊದಲ ಬಾರಿ ತಪ್ಪು ಮಾಡಿದರೆ 5000 ದಂಡ, ಮರುಕಳಿಸಿದರೆ 5000 + ಹೆಚ್ಚುವರಿ 500 ದಂಡ. ಕಟ್ಟದಿದ್ದರೆ ನೀರಿನ ಬಿಲ್ಲಿನಲ್ಲೇ ಸೇರಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ಸರ್ಪ್ರೈಸ್ ವಿಸಿಟ್ ಮೂಲಕ ಅಧಿಕಾರಿಗಳ ತಪಾಸಣೆ :
ಸ್ಥಳದಲ್ಲೇ ದಂಡದ ನೋಟಿಸ್ ನೀಡಿ ನಿಯಮ ಉಲ್ಲಂಘನೆ ಮಾಡಿದರೆ ನೀರಿನ ಸಂಪರ್ಕ ಕಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ.ಕಾವೇರಿ ನೀರನ್ನು ಅನಗತ್ಯವಾಗಿ ಬಳಸಿದರೆ ಕಠಿಣ ಕ್ರಮ. ವಾಹನ ತೊಳೆಯುವಂತಹ ಬಳಕೆಗಳಿಗೆ ಸಂಪೂರ್ಣ ನಿಷೇಧಿಸಲಾಗಿದ್ದು, ಕಾನೂನು ಆಧಾರ 1964ರ ಕಾಯ್ದೆಯ ಕಲಂ 109 ಪ್ರಕಾರ ನೀರು ಪೋಲು ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಕಾವೇರಿ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದು, ನಾಗರಿಕರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ.
