ಮೈಸೂರು,ಫೆ.19- ಇತ್ತೀಚೆಗೆ ನಗರದ ಅರಮನೆ ಸಮೀಪ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸುರಕ್ಷತೆ ಮತ್ತು ಜೀವ ರಕ್ಷಣೆ ದೃಷ್ಟಿಯಿಂದ ಇನ್ನು ಮುಂದೆ ನಗರದಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್ ತುಂಬುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ನಗರ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಮಾರಂಭಗಳಲ್ಲಿ ಹೀಲಿಯಂ ಬಲೂನು ಮಾರಾಟ ಮತ್ತು ತುಂಬುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಸಾಗಾಟವನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹೀಲಿಯಂ ಅನಿಲ ಬಳಸಿ ಬಲೂನುಗಳನ್ನು ತುಂಬುವ ಸಂದರ್ಭದಲ್ಲಿ ಸಂಭವಿಸುವ ದುಷ್ಪರಿಣಾಮಗಳಿಂದ ಸಾರ್ವಜನಿಕ ಜೀವ ಮತ್ತು ಆಸ್ತಿಗಳಿಗೆ ಹಾನಿಯುಂಟಾಗಿರುವುದನ್ನು ಗಂಭೀರ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೀಮಾ ಲಟ್ಕರ್ ತಿಳಿಸಿದ್ದಾರೆ.
