ದಾವಣಗೆರೆ,ಫೆ.19- ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳಿಗೆ ಲಘು ಹದಯಾಘಾತವಾಗಿದ್ದು, ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.
ತಿಂಥಣಿ ಬ್ರಿಜ್ ಸಮೀಪದ ಬಂಡೊಳ್ಳಿ ಗ್ರಾಮದಲ್ಲಿರುವ ಶ್ರೀಮಠದ ಉದ್ದೇಶಿತ ವಿದ್ಯಾಸಂಸ್ಥೆ ಮಾಡುವ ಸ್ಥಳಕ್ಕೆ ನಿನ್ನೆ ಭೇಟಿ ನೀಡಿ ಸಮಾಜದ ಮುಖಂಡರೊಂದಿಗೆ ಸ್ಥಳ ವೀಕ್ಷಿಸಿ ಸಭೆ ಕೂಡ ಮಾಡಿದ್ದರು.
ನಂತರ ಅಲ್ಲಿಯೇ ಇರುವ ಕನಕಗುರು ಪೀಠಕ್ಕೆ ತೆರಳಿ ಇತ್ತೀಚೆಗೆ ಲಿಂಗೈಕ್ಯರಾಗಿರುವ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಟ್ಟಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಿದ್ದರು.
ನಿನ್ನೆ ಗುರುಗಳು ಲವಲವಿಕೆಯಿಂದಲೇ ಇದ್ದರು. ಆದರೆ, ಹಟ್ಟಿಯಲ್ಲಿ ಲಘು ಹದಯಾಘಾತ ಉಂಟಾಗಿದ್ದರಿಂದ ತಕ್ಷಣವೇ ಅವರನ್ನು ರಾಯಚೂರಿನ ವಿ.ಜಿ. ಕುಲಕರ್ಣಿ ಹದಯ ಆಸ್ಪತ್ರೆಗೆ ಎಸ್ಕಾರ್ಟ್ ಸಹಾಯದೊಂದಿಗೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಅವರು ಚೇತರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಕೆ.ಶಿವನಗೌಡ ನಾಯಕ ಅವರು ಮೊಬೈಲ್ ವೀಡಿಯೋ ಕಾಲ್ ಮೂಲಕ ಆಸ್ಪತ್ರೆಯ ವೈದ್ಯರಿಗೆ ಸಂಪರ್ಕಿಸಿ ಗುರುಗಳ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದ್ದಲ್ಲದೆ ಗುರುಗಳಿಗೂ ಕೂಡ ಧೈರ್ಯ ಹೇಳಿದರು.
ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಅಜಿತ್ ಕುಲಕರ್ಣಿ, ಡಾ. ಬಸನಗೌಡ ಪಾಟೀಲ್, ಡಾ. ಬಸವರಾಜ್ ಪಾಟೀಲ್ ಕೊಪ್ಪೂರು ಹಾಗೂ ಡಾ. ಸುರೇಶ್ ಸಗರದ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ಮಧ್ಯರಾತ್ರಿಯಲ್ಲಿಯೇ ಸೇರಿಸಲಾಗಿದೆ. ಈಗ ಗುರುಗಳು ಆರೋಗ್ಯವಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಶ್ರೀಗಳು ಬೇಗ ಗುಣಮುಖರಾಗಲಿ ಎಂದು ವಾಲೀಕಿ ನಾಯಕ ಸಮುದಾಯದ ಮುಖಂಡರಾದ ಬಿ.ವೀರಣ್ಣ, ಲಕ್ಷೀದೇವಿ ವೀರಣ್ಷ, ಡಾ.ಎ.ಬಿ.ರಾಮಚಂದ್ರ, ಆನಂದ ಗೂರೂಜಿ, ಮಾಜಿ ಮೇಯರ್ ವಿನಾಯಕ ಪೈಲ್ವಾನ್, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ.ನೌಕರರ ಸಂಘದ ಗೌರವಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಸೇರಿದಂತೆ ಸಮಾಜದವರು, ಹಿತೈಷಿಗಳು ಪ್ರಾರ್ಥನೆ ಮಾಡಿದ್ದಾರೆ.
