Sunday, April 28, 2024
Homeರಾಜ್ಯವಿಧಾನಪರಿಷತ್‍ ವಿಪಕ್ಷ ನಾಯಕ-ಉಪನಾಯಕರನ್ನು ನೇಮಿಸಿದ ಬಿಜೆಪಿ, ಯತ್ನಾಳ್‌ಗೆ ಮತ್ತೆ ಹಿನ್ನಡೆ

ವಿಧಾನಪರಿಷತ್‍ ವಿಪಕ್ಷ ನಾಯಕ-ಉಪನಾಯಕರನ್ನು ನೇಮಿಸಿದ ಬಿಜೆಪಿ, ಯತ್ನಾಳ್‌ಗೆ ಮತ್ತೆ ಹಿನ್ನಡೆ

ಬೆಂಗಳೂರು: ಕಳೆದ ಹತ್ತು ತಿಂಗಳಿನಿಂದ ಖಾಲಿ ಇದ್ದ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕರಾಗಿ ಮಾಜಿ ಸಚಿವ ಹಿರಿಯ ಮುಖಂಡ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಪರಿಷತ್‍ನ ಉಪನಾಯಕರಾಗಿ ಅಚ್ಚರಿ ಎಂಬಂತೆ ಕಲ್ಬುರ್ಗಿಯ ಲಂಬಾಣಿ ಸಮುದಾಯದ ಸುನೀಲ್ ವಲ್ಲಾಪುರೆ ಅವರನ್ನು ನೇಮಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದರು. ಸದಸ್ಯರಾದ ಶಶಿಲ್ ನಮೋಶಿ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ರಮೇಶ್, ನಾರಾಯಣಸ್ವಾಮಿ , ರಘುನಾಥ್ ಮಲ್ಕಾಪುರೆ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ಸಂಘ ಪರಿವಾರದ ಹಿನ್ನಲೆ, ಕರಾವಳಿಯ ಹಿರಿಯ ನಾಯಕರಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆಯೂ ಅವರು ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ ಅನುಭವವಿದೆ.

ವಾಹನ ಸವಾರರಿಗೆ ಗುಡ್ ನ್ಯೂಸ್, ಫಾಸ್ಟ್ ಟ್ಯಾಗ್ ಕಿರಿಕಿರಿಗೆ ಮುಕ್ತಿ

ವಿಶೇಷವೆಂದರೆ ಇದರ ಆಯ್ಕೆಯಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರಭಾವ ಕೆಲಸ ಮಾಡಿರುವುದು ಗೋಚರಿಸಿದೆ. ಪ್ರತಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎನ್.ರವಿಕುಮಾರ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ. ಈ ಮೂವರು ಕೂಡ ಯಡಿಯೂರಪ್ಪನವರ ಆಪ್ತರು.

ಯತ್ನಾಳ್‍ಗೆ ಹಿನ್ನಡೆ:
ಸ್ವಪಕ್ಷದವರ ವಿರುದ್ದವೇ ಗುಡುಗುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಮತ್ತೆ ಭಾರೀ ಹಿನ್ನಡೆಯಾಗಿದೆ. ಈ ಹಿಂದೆ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟು ನಿರಾಶೆಯಾಗಿದ್ದ ಅವರಿಗೆ ಮತ್ತೆ ಮುಖಭಂಗವಾಗಿದೆ.

ಏಕೆಂದರೆ ಯತ್ನಾಳ್ ಆಪ್ತವಲಯದಲ್ಲ ಗುರುತಿಸಿಕೊಂಡಿದ್ದ ಪಂಚಮಸಾಲಿ ಸಮುದಾಯದ ಯುವಕ ಅರವಿಂದ್ ಬೆಲ್ಲದ್ ಅವರನ್ನು ವಿಧಾನಸಭೆಯ ಉಪನಾಯಕರನ್ನಾಗಿ ಪಕ್ಷ ನೇಮಿಸಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿರುವಾಗ ಯತ್ನಾಳ್ ಜೊತೆಗೆ ಬೆಲ್ಲದ್ ಕೂಡ ಕೈ ಜೋಡಿಸಿದ್ದರು. ಇದೀಗ ಪಕ್ಷವು ಯತ್ನಾಳ್‍ಗೆ ಠಕ್ಕರ್ ಕೊಡಲೆಂದೇ ಕಿತ್ತೂರು ಕರ್ನಾಟಕಕ್ಕೆ ಸೇರಿದ ಬೆಲ್ಲದ್ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ.

ಇನ್ನು ಮುಖ್ಯ ಸಚೇತಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕರಾದ ಸತೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್ ಮತ್ತಿತರರಿಗೆ ತೀವ್ರ ನಿರಾಸೆಯಾಗಿದೆ. ಇಲ್ಲಿಯೂ ಕೂಡ ಅಚ್ಚರಿ ಎಂಬಂತೆ ಶಾಸಕ ದೊಡ್ಡನಗೌಡರ್ ಪಾಟಿಲ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.

ಎರಡು ದಿನಗಳ ಹಿಂದಷ್ಟೇ ಪಕ್ಷದ ಪದಾಕಾರಿಗಳ ಆಯ್ಕೆಯಲ್ಲಿ ಮೇಲುಗೈ ಸಾಸಿದ್ದ ಯಡಿಯೂರಪ್ಪ ಇದೀಗ ಪ್ರತಿಪಕ್ಷದ ನಾಯಕ, ಉಪನಾಯಕರ ಆಯ್ಕೆಯಲ್ಲಿ ತಮ್ಮ ಹಿಡಿತವನ್ನು ಕಾಯ್ದುಕೊಂಡಿದ್ದಾರೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಯ್ಕೆಯಲ್ಲೂ ಯಡಿಯೂರಪ್ಪ ಪ್ರಭಾವ ಸ್ಪಷ್ಟವಾಗಿತ್ತು.

RELATED ARTICLES

Latest News