ಕೋಲಾರ,ಆ.12- ಭೀಮನ ಅಮಾವಾಸ್ಯೆಯಂದು ಗಂಡನಿಗೆ ಪೂಜೆ ಮಾಡುವ ಬದಲು ಪತಿಯನ್ನೇ ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಾರಾಯಣಸ್ವಾಮಿ (68) ಎಂದು ಗುರುತಿಸಲಾಗಿದ್ದು, ಆರೋಪಿತ ಪತ್ನಿ ಜಗದಾಂಭ (58) ಎಂದು ತಿಳಿದುಬಂದಿದೆ.
ದಂಪತಿ ನಡುವೆ ಅಸಮಾಧಾನ ಉಂಟಾಗಿದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಕಳೆದ ಎರಡು-ಮೂರು ದಿನಗಳಿಂದ ಹಣದ ವಿಚಾರವಾಗಿ ಪತಿಯನ್ನು ಪುಸಲಾಯಿಸಿದ ಜಗದಾಂಭ, ಅವರನ್ನು ತೋಟದ ಮನೆಗೆ ಕರೆತಂದಿದ್ದಳು ಎನ್ನಲಾಗಿದೆ.
ಭೀಮನ ಅಮಾವಾಸ್ಯೆಯ ರಾತ್ರಿ ಊಟದಲ್ಲಿ 10 ನಿದ್ರೆ ಮಾತ್ರೆಗಳನ್ನು ಬೆರೆಸಿ ಪತಿಗೆ ನೀಡಿದ್ದಾಳೆ. ಮಾತ್ರೆ ಸೇವಿಸಿ ನಾರಾಯಣಸ್ವಾಮಿ ನಿದ್ರೆಗೆ ಜಾರಿದ ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಜಗದಾಂಭ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಪೊಲೀಸರ ವಿಚಾರಣೆ ವೇಳೆ, ಜಮೀನು ಮಾರಾಟದಿಂದ ಬಂದ ಹಣವನ್ನು ಪತಿ ತನ್ನ ಕೈಗೆ ನೀಡಿರಲಿಲ್ಲ. ಅಲ್ಲದೆ ಉಳಿದ ಜಮೀನನ್ನೂ ಮಾರಾಟ ಮಾಡಿ ಹಣವನ್ನು ನೀಡುವುದಿಲ್ಲ ಎಂಬ ಆತಂಕದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
