ಬೆಂಗಳೂರು, ಜೂ. 18- ಆಡಳಿತರೂಢ ಕಾಂಗ್ರೆಸ್ನ 5 ಮಂದಿ ಶಾಸಕರು ಅನಾರೋಗ್ಯದ ನಡುವೆಯೂ ವಿಧಾನಸೌಧಕ್ಕೆ ಬಂದು ಮತ ಚಲಾಯಿಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸೋಂಕು ಜ್ವರ ಪೀಡಿತರಾಗಿ ಕಳೆದ ಒಂದು ವಾರದಿಂದ ಮನೆಯಲ್ಲೇ ಉಳಿದು ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ವಿಧಾನಸೌಧಕ್ಕೆ ಆಗಮಿಸಿ ವಿಧಾನಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜುಕಾಗೆ ಅನಾರೋಗ್ಯದಿಂದಾಗಿ ವೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಸಾರಿಗೆ ಸಚಿವ ಭೈರತಿಸುರೇಶ್ ಕೂಡ ಮುಖಕ್ಕೆ ಮಾಸ್ಕ್ ಧರಿಸಿ ಬಂದು ಚುನಾವಣೆಯಲ್ಲಿ ಭಾಗವಹಿಸಿದರು. ದೆಹಲಿ ಪ್ರವಾಸದ ವೇಳೆ ಅಸ್ವಸ್ಥಗೊಂಡು ಒಂದು ವಾರ ಕಾಲ ದೆಹಲಿಯಲ್ಲೇ ಚಿಕಿತ್ಸೆ ಪಡೆದಿದ್ದ ತಿಪಟೂರು ಶಾಸಕ ಕೆ.ಷಡಕ್ಷರಿ, ಹೃದಯ ಸಂಬಂಧಿತ ಅಸ್ವಸ್ಥತೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ ರಾಮನಗರ ಶಾಸಕ ಇಕ್ಬಬಾಲ್ ಹುಸೇನ್ ಅವರು ತಮ್ಮ ಹಕ್ಕು ಚಲಾಯಿಸಿದರು.
ಕೆ.ಷಡಕ್ಷರಿ ಮತ ಚಲಾಯಿಸಲು ಬಂದಾಗ ಅವರೊಂದಿಗೆ ಆಪ್ತ ಸಹಾಯಕರು ಮತಗಟ್ಟೆಗೆ ತೆರಳಲು ಪ್ರಯತ್ನಿಸಿದರು. ಆದರೆ ಅದಕ್ಕೆ ಅವಕಾಶ ನೀಡದ ಚುನಾವಣಾ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳು ತಾವೇ ಶಾಸಕರ ಜೊತೆ ಬೆಂಬಲವಾಗಿ ತೆರಳಿದರು. ರಾಜುಕಾಗೆ ಅವರನ್ನು ಸಹಾಯಕರೊಬ್ಬರು ವೀಲ್ಚೇರ್ನಲ್ಲಿ ಮತಗಟ್ಟೆಗೆ ಕರೆದುಕೊಂಡು ಹೋಗಿದ್ದು ಕಂಡು ಬಂತು.
